ಗುಳೇದಗುಡ್ಡ: ಗುಳೇದಗುಡ್ಡ ಸಮೀಪದಲ್ಲಿ ಅಕ್ರಮ ಗ್ರಾನೈಟ್ ಗಣಿಗಾರಿಕೆಗೆ ಅಮೂಲ್ಯ ಶಿಲ್ಪ ಕಲೆಗಳ ಸಂಪತ್ತು ಮಂಜುಗಡ್ಡೆಯಂತೆ ಕರಗಿ ಹಾಳಾಗುವ ಜೊತೆಗೆ ಚಾಲುಕ್ಯರ ನಾಡಿನಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿದ ಶಂಕರಲಿಂಗ ದೇವಾಲಯಕ್ಕೂ ಧಕ್ಕೆ ಉಂಟಾಗುತ್ತಿದೆ.
ಅಕ್ರಮ ಗಣಿಗಾರಿಕೆ ಸಾಗುವಳಿ ಜಮೀನಿಗೂ ವ್ಯಾಪಿಸಿದೆ. ನಾಗರಾಳ ಎಸ್.ಪಿ. ಹಾಗೂ ಪಟ್ಟದಕಲ್ಲು ಮಾರ್ಗದಲ್ಲಿ ರಾಜಾ ರೋಷವಾಗಿ ಗಣಿಗಾರಿಕೆ ನಡೆದಿರುವುದು ಬೆಳಕಿಗೆ ಬಂದಿದೆ. ನಾಗರಾಳ ಎಸ್.ಪಿ-ಪಟ್ಟದಕಲ್ಲ ರಸ್ತೆ ಮಾರ್ಗದ ಗುಡ್ಡದಲ್ಲಿ ಐತಿಹಾಸಿಕ ಶಂಕರಲಿಂಗ ದೇವಸ್ಥಾನವಿದೆ.
ಅದು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಿದ ದೇವಾಲಯ ಎನ್ನಲಾಗಿದೆ. ದೇವಸ್ಥಾನದ ಸುತ್ತ ಮುತ್ತಲಿನ 8 ಕಡೆಗೆ ಗವಿ ಇವೆ. ಅವು ಈಗ ಶಿಥಿಲಾವಸ್ಥೆಯಲ್ಲಿವೆ ಎಂದು ಅರ್ಚಕ ಶಂಕ್ರಪ್ಪ ಶಂಕರಗುಂಡಿ ಹೇಳುತ್ತಾರೆ.
ಇದೊಂದು ಐತಿಹಾಸಿಕ ದೇಗುಲದ ಐದು ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಬಾರದು ಗ್ರಾಮಸ್ಥರು ಗ್ರಾನೈಟ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈಗ ಅದು ಯಾವುದು ಲೆಕ್ಕಕ್ಕಿಲ್ಲ.
ಅಕ್ರಮ ಗಣಿಗಾರಿಕೆ ಯಿಂದಾಗಿ ದೇವಸ್ಥಾನಕ್ಕೆ ಹಾನಿಉಂಟಾಗುತ್ತಿದೆ ಎನ್ನುತ್ತಾರೆ ಪರಸಪ್ಪ ನಾಗಪ್ಪ ಕಾಗಲಗೊಂಬ ಹಾಗೂ ಸೋಮಪ್ಪ ಕೆಂಚಪ್ಪ ಹುಲ್ಯಾಳ. ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಅರಣ್ಯ ಇಲಾಖೆ. ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯನ್ನು ತಡೆದು ಐತಿಹಾಸಿಕ ದೇವಲಾಯವನ್ನು ಉಳಿಸಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.