ಡಂಬಳ: ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟದಿಂದ ರೋಸಿ ಹೋದ ಮಹಿಳೆಯರು ಮದ್ಯ ಮಾರಾಟ ಮಾಡುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ಸಮೀಪದ ಕದಾಂಪುರದಲ್ಲಿ ನಡೆದಿದೆ.
ಕದಾಂಪುರ ಗ್ರಾಮದಲ್ಲಿ ಹಗಲು-ರಾತ್ರಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾದ ಪರಶುರಾಮ ಹರಿಜನ ಎಂಬುವರಿಗೆ ಹಲವಾರು ಬಾರಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ತಿಳುವಳಿಕೆ ಹೇಳಿದ್ದರೂ ಗ್ರಾಮದ ಮಧ್ಯದಲ್ಲಿಯೇ ಮಾರಾಟದಲ್ಲಿ ತೊಡಗಿದ್ದರು. ಇದರಿಂದಾಗಿ ಆತನಿಗೆ ಸೇರಿದ ಡಬ್ಬಿ ಅಂಗಡಿ ಹಾಗೂ ಗುಡಿಸಲಿಗೆ ಮಹಿಳೆಯರು ಸಾಮೂಹಿಕವಾಗಿ ಹೋಗಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ದಾರಿಯಲ್ಲಿ ನಡೆದು ಹೋಗುವಾಗ, ಬಟ್ಟೆ ತೊಳೆಯುವಾಗ ಮತ್ತು ನೀರು ತುಂಬು ಸಮಯದಲ್ಲಿ ಕುಡಿದ ಅಮಲಿನಲ್ಲಿ ಇದ್ದ ಕೆಲವರು ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಕೆಲವರು ಗಲಾಟೆ ಮಾಡಿದ್ದಾರೆ.
ಇದರಿಂದ ಬೇಸತ್ತ ಗ್ರಾಮದ ಮಹಿಳೆಯರು ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪಂಚಾಯಿತಿ ಸದಸ್ಯರಿಗೆ ಮದ್ಯ ಮಾರಾಟ ನಿಲ್ಲಿಸುವಂತೆ ಮೌಖಿಕವಾಗಿ ಮನವಿ ಮಾಡಿದ್ದರು.
ಪಂಚಾಯಿತಿಯವರು ತಿಳುವಳಿಕೆ ನೀಡಿದ ಮೇಲೆ ರುದ್ರಪ್ಪ ಹರಿಜನ ಎಂಬುವವರು ಮದ್ಯ ಮಾರಾಟವನ್ನು ನಿಲ್ಲಿಸಿದರು. ಆದರೆ ಪರಶುರಾಮ ಹರಿಜನ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ವಾಗ್ವಾದ ನಡೆಸಿ ಮದ್ಯ ಮಾರಾಟ ಆರಂಭಿಸಿದ ಎನ್ನಲಾಗಿದೆ.
ಈ ಬೆಳವಣಿಗೆಯಿಂದ ರೊಚ್ಚಿಗೆದ್ದ ಗ್ರಾಮದ ಮಹಿಳೆಯರು ಗ್ರಾಮಸ್ಥರೊಂದಿಗೆ ಸೇರಿ ಮದ್ಯ ಮಾರಾಟ ಮಾಡಲಾಗುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಆಗಮಿಸಿದ ಪೋಲೀಸರು ಮದ್ಯ ಮಾರಾಟಗಾರನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.