ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಿಲಿಂಡರ್ ಬಳಕೆ: ರಿಕ್ಷಾ ತಪಾಸಣೆ

Last Updated 6 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಆಟೋ ರಿಕ್ಷಾಗಳಲ್ಲಿ ಅನಧಿಕೃತವಾಗಿ ಅಡುಗೆ ಅನಿಲ ಅಳವಡಿಸಿ ಪರಿಸರಕ್ಕೆ ಹಾನಿ ಉಂಟುಮಾಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತವು ವಿಶೇಷ ತನಿಖಾ ತಂಡ ರಚಿಸಿದ್ದು, ಬುಧವಾರದಿಂದ ಮೂರು ದಿನಗಳ ಅವಧಿಯ ತಪಾಸಣೆ ಆರಂಭವಾಗಿದೆ.

ತನಿಖಾ ತಂಡದ ಸದಸ್ಯರು ಮೊದಲ ದಿನವೇ ನಗರದ ವಿವಿಧೆಡೆ ದಾಳಿ ನಡೆಸಿ 11 ಆಟೋ ರಿಕ್ಷಾಗಳು ಹಾಗೂ 11 ಅಕ್ರಮ ಸಿಲಿಂಡರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳೀಯ ಮೋತಿ ವೃತ್ತ, ರಾಯಲ್ ವೃತ್ತ ಹಾಗೂ ಸುಧಾ ವೃತ್ತದ ಬಳಿ ಇದೇ 8ರವರೆಗೆ ತಪಾಸಣೆ ನಡೆಸಲಿರುವ ತನಿಖಾ ತಂಡ, ಅಕ್ರಮವಾಗಿ ಅಡುಗೆ ಅನಿಲ ಅಳವಡಿಸಿದ ಆಟೋ ರಿಕ್ಷಾಗಳನ್ನು ವಶಕ್ಕೆ ತೆಗೆದುಕೊಳ್ಳಲಿದೆ.

ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಮಾರ್ಚ್ 29ರಂದು ಸಭೆ ನಡೆಸಿ, ಅನಧಿಕೃತವಾಗಿ ಅಡುಗೆ ಅನಿಲವನ್ನು ಬಳಸುವುದಕ್ಕೆ ತಡೆಯೊಡ್ಡಲೆಂದೇ ಆದೇಶ ಹೊರಡಿಸಿ, ಪ್ರಾದೇಶಿಕ ಸಾರಿಗೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ  ಮೂರು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಈ ಮೂರು ದಿನಗಳ ಕಾಲ ತಪಾಸಣೆ ನಡೆಯಲಿದೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಆಹಾರ ಶಾಖೆಯಲ್ಲಿ ನಡೆದ ಸಭೆಯಲ್ಲಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು, ಸರಕಾರವು ಸಹಾಯಧನ ಸೌಲಭ್ಯದಡಿ ಗ್ಯಾಸ್ ಕಿಟ್‌ಗಳನ್ನು ಪೂರೈಸುವವರೆಗೂ ಅಡುಗೆ ಅನಿಲ ಬಳಕೆಗೆ ಅನುಮತಿ ನೀಡುವಂತೆ ಕೋರಿದರು.

ಯಾವುದೇ ಸೂಚನೆ ನೀಡದೆ ಈ ರೀತಿ ದಿಢಿ ರ್ ತಪಾಸಣೆ ನಡೆಸಿ, ಆಟೋ ರಿಕ್ಷಾಗಳನ್ನು ವಶಕ್ಕೆ ತೆಗೆದುಕೊಳ್ಳುವುದರಿಂದ ಆಟೋ ರಿಕ್ಷಾ ನಂಬಿದವರಿಗೆ ತೀವ್ರ ತೊಂದರೆ ಎದುರಾಗುತ್ತದೆ. ಮೂರು ತಿಂಗಳ ಅವಧಿಯಲ್ಲಿ ಸಹಾಯಧನ ಸೌಲಭ್ಯದಡಿ 5 ಕೆಜಿ ತೂಕದ ವಾಣಿಜ್ಯ ಬಳಕೆ ಗ್ಯಾಸ್ ಕಿಟ್ ಪೂರೈಸಿ, ಈ ನಿಯಮ ಜಾರಿಗೊಳಿಸಬೇಕು ಎಂದು ಅವರು ಕೋರಿದರಾದರೂ ಜಿಲ್ಲಾಡಳಿತ ಅದಕ್ಕೆ ಒಪ್ಪಿಗೆ ನೀಡಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT