ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಕೇವಲ ಪಂದ್ಯ ಅಲ್ಲ ಎಂಬುದನ್ನು ವಿಶ್ವದ ಈ ಭಾಗದ ಎಲ್ಲ ಜನರು ಹೇಳುತ್ತಾರೆ. ಆದರೆ ಇದೊಂದು ಕ್ರಿಕೆಟ್ ಪಂದ್ಯ ಎಂಬುದನ್ನು ಆಟಗಾರರು ಮನಗಾಣಬೇಕು. ಇವೆರಡು ದೇಶಗಳ ನಡುವೆ ಹಲವು ಸಲ ಸಂಘರ್ಷ ನಡೆದಿರಬಹುದು. ಆದರೆ ಆಟಗಾರರು ಕೇವಲ ಪಂದ್ಯದ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು ಅಗತ್ಯ.
ಅಂಗಳದ ಹೊರಗಿನ ಅಂಶಗಳು ಈ ಪಂದ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇದರಿಂದ ಆಟಗಾರ ಒತ್ತಡ ಅನುಭವಿಸುತ್ತಾನೆ. ರಾಜಕೀಯದ ಮೇಲೆ ನಮಗೆ ನಿಯಂತ್ರಣ ಸಾಧ್ಯವಿಲ್ಲ. ಇದೀಗ ಅಂಗಳದೊಳಗಿನ ವಿಚಾರಕ್ಕೆ ಬರೋಣ. ಶೋಯಬ್ ಅಖ್ತರ್ ಅಂತಿಮ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವರೇ ಎಂಬುದು ಕುತೂಹಲದ ವಿಷಯ. ನನಗೆ ತಿಳಿದ ಮಾಹಿತಿಯ ಪ್ರಕಾರ ಅವರು ಕಣಕ್ಕಿಳಿಯುವರು. ಅವರು ಮೊದಲ ಸ್ಪೆಲ್ನಲ್ಲಿ ಪ್ರಭಾವಿ ಎನಿಸುವರು. ಬಳಿಕದ ಸ್ಪೆಲ್ಗಳಲ್ಲಿ ಅವರಿಂದ ಉತ್ತಮ ಬೌಲಿಂಗ್ ನಿರೀಕ್ಷಿಸುವುದು ತಪ್ಪು. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದರೂ, ಅಖ್ತರ್ ಈಗಲೂ ಒಬ್ಬ ಅಪಾಯಕಾರಿ ಬೌಲರ್.
ಅಫ್ರಿದಿ ಈ ಟೂರ್ನಿಯಲ್ಲಿ ಇದುವರೆಗೆ ಪಾಕ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಸಹ ಆಟಗಾರರಿಗೆ ಉತ್ತೇಜನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಭಾರತ ತಂಡದ ನಾಯಕ ದೋನಿ ಅವರೂ ಹಿಂದೆ ಬಿದ್ದಿಲ್ಲ. ದೋನಿ ಎಷ್ಟೊಂದು ‘ಕೂಲ್’ ಆಗಿರುವರು ಎಂದರೆ, ಅವರಿಗೆ ಆತಂಕ ಎಂದರೇನು ಎಂಬುದು ತಿಳಿದೇ ಇಲ್ಲ. ಆದ್ದರಿಂದ ಭಾರತ ತಂಡದ ಎಲ್ಲ ಆಟಗಾರರು ನಾಯಕ ದೋನಿ ಅವರಂತೆ ಒತ್ತಡಕ್ಕೆ ಒಳಗಾಗದೆ ಆಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.