ಬದೌನ್ (ಉತ್ತರಪ್ರದೇಶ) (ಪಿಟಿಐ): ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಅಜಂ ಖಾನ್ ವಿರುದ್ಧ ದೇಶದ್ರೋಹ ಆರೋಪದ ಮೇಲೆ ಎಫ್ಐಆರ್ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ಆದೇಶ ನೀಡಿದೆ.
ಬಜರಂಗ ದಳದ ನಾಯಕ ಯು. ಗುಪ್ತಾ ಅವರು ಸಲ್ಲಿಸಿದ ಅರ್ಜಿ ಆಧಾರದ ಮೇಲೆ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪವನ್ ಪ್ರತಾಪ್ ಸಿಂಗ್ ಈ ಆದೇಶ ನೀಡಿದರು.
ಐಪಿಸಿಯ 124 (ಎ) ಸೆಕ್ಷನ್ನಡಿ ದೇಶದ್ರೋಹ ಪ್ರಕರಣ ದಾಖಲಿಸಿ ತನ್ನ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಯುಪಿಎ ಸರ್ಕಾರದಲ್ಲಿ ಗುಲಾಂ ನಬೀ ಆಜಾದ್ ಅವರು ಸಂಪುಟ ಸಚಿವರಾಗಿರುವ ಏಕೈಕ ಮುಸ್ಲಿಂ. ಆದರೆ ಅವರು ‘ಕಾಶ್ಮೀರಿ’ ಎಂದು ಈಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಖಾನ್ ಹೇಳಿದ್ದರು.
‘ಕೇಂದ್ರ ಸಂಪುಟದಲ್ಲಿ ಮುಸ್ಲಿಂ ಸಚಿವರಿರುವುದು ಒಬ್ಬರು ಮಾತ್ರ. ಅವರೂ ಭಾರತದವರಲ್ಲ, ಕಾಶ್ಮೀರದವರು. ಕಾಶ್ಮೀರ ಇನ್ನೂ ವಿವಾದದಲ್ಲಿದೆ. ಅದು ಭಾರತದ ಅವಿಭಾಜ್ಯ ಅಂಗವೇ, ಇಲ್ಲವೇ ಎಂಬುದು ನಮಗೆ ಗೊತ್ತಿಲ್ಲ’ ಎಂದು ಅವರು ಹೇಳಿದ್ದರು.