ಯಲಹಂಕ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ಸ್ಥಾಪನೆಯಾಗಿರುವ ಅಟಲ್ಜೀ ಜನಸ್ನೇಹಿ ಕೇಂದ್ರದ(ನಾಡಕಚೇರಿ)ಉದ್ಘಾಟನೆಯನ್ನು ಶಾಸಕ ಎಸ್.ಆರ್.ವಿಶ್ವನಾಥ್ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಈ ಹಿಂದೆ ಇಲ್ಲಿಯೆ ಕಾರ್ಯನಿರ್ವಹಿಸುತ್ತಿದ್ದ ಈ ಕೇಂದ್ರವನ್ನು ಕಾರಣಾಂತರದಿಂದ ಸಿಂಗನಾಯಕನಹಳ್ಳಿಗೆ ಸ್ಥಳಾಂತರಿಸಿದ್ದ ಪರಿಣಾಮ, ಯಲಹಂಕ ಭಾಗದ ಜನರಿಗೆ ತೊಂದರೆಯಾಗಿತ್ತು. ಇಂದಿನಿಂದ ಈ ಕಚೇರಿಯು ಇಲ್ಲಿಯೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಇಲ್ಲಿಯೆ ಪಡೆಯಬಹುದಾಗಿದೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಚಾಲನೆ: ಕ್ಷೇತ್ರ ವ್ಯಾಪ್ತಿಯ ಸಿಂಗನಾಯಕನಹಳ್ಳಿ ಮತ್ತು ಬೆಟ್ಟಹಳ್ಳಿಯಲ್ಲಿ `ಅನ್ನಭಾಗ್ಯ' ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇಡೀ ಕ್ಷೇತ್ರದಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.