ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಬಗ್ಗೆ ಯಾವುದೇ ಪ್ರಶ್ನೆಗೆ ಉತ್ತರಿಸಲು ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿದರು.
ಭ್ರಷ್ಟಾಚಾರದ ವಿರುದ್ಧ ರಾಷ್ಟ್ರದಾದ್ಯಂತ ಯಾತ್ರೆ ನಡೆಸಲು 83 ವರ್ಷದ ಅಡ್ವಾಣಿ ಮುಂದಾಗಿದ್ದು, ಇದಕ್ಕೆ ಪಕ್ಷದ ಸಂಸದೀಯ ಸಮಿತಿ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಉದ್ಭವವಾಗಿದೆ.
`ಅಡ್ವಾಣಿ ಅವರ ಯಾತ್ರೆಯಲ್ಲಿ ತೀರಾ ರಾಜಕೀಯ ಹುಡುಕಲು ಹೋಗಬೇಡಿ. ಅವರ ಯಾತ್ರೆಗೆ ಪಕ್ಷ ಒಪ್ಪಿಗೆ ನೀಡಿದೆ. ನಾವೆಲ್ಲರೂ ಅವರ ಜತೆಗೆ ಇರುತ್ತೇವೆ~ ಎಂದರು.ಜೇಟ್ಲಿ ಅವರನ್ನು ಈ ಬಗ್ಗೆ ಕೆಣಕಿದಾಗ, `ಸುಷ್ಮಾ ಸ್ಪಷ್ಟವಾಗಿ ಉತ್ತರಿಸಿದ್ದಾರೆ. ಅವರು ಹೇಳಿದ್ದು ನಿಮಗೂ ಅರ್ಥವಾಗಿದೆ~ ಎಂದು ಚುಟುಕಾಗಿ ಹೇಳಿ ಸುಮ್ಮನಾದರು.