ಅಕ್ಕಿಆಲೂರ: ಪಟ್ಟಣವೂ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ನೂರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿಯ ವೀರಭದ್ರೇಶ್ವರ ಮಹಾ ರಥೋತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.
ವೀರಭದ್ರೇಶ್ವರ ಉತ್ಸವ ಮೂರ್ತಿ ಇದ್ದ ಮಹಾರಥಕ್ಕೆ ಸಂಜೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ರಥ ಬೀದಿಯಲ್ಲಿ ಸಾಗಿದ ರಥೋತ್ಸವ ಮೆಣಸಿನಕಾಯಿ ಪೇಟೆ ಪ್ರವೇಶಿಸಿತು. ನಂತರ ಆರಂಭದಲ್ಲಿ ಸಾಗಿದ ಮಾರ್ಗದ ಮೂಲಕ ಹಾಯ್ದು ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು.
ರಥ ಸಾಗಿದ ಬೀದಿಯನ್ನು ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಎಲ್ಲ ಮನೆಯ ಅಂಗಳದಲ್ಲಿ ಮಹಿಳೆಯರು ವೀರಭದ್ರೇಶ್ವರ ಉತ್ಸವ ಮೂರ್ತಿಗೆ ಆರತಿ ಎತ್ತಿ ಸಾಂಪ್ರದಾಯಿಕ ಗೌರವ ಸಲ್ಲಿಸಿದರು.
ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಸ್ಥಳೀಯ ವಿರಕ್ತಮಠದ ಶಿವಬಸವ ಶ್ರೀಗಳು, ಎಂ.ಜಿ.ನೀರಲಗಿಯ ವಿರಕ್ತಮಠದ ನಿಜಲಿಂಗ ಶ್ರೀಗಳು, ಹುಬ್ಬಳ್ಳಿಯ ಕಲ್ಯಾಣ ಮಠದ ಚನ್ನವೀರ ಶ್ರೀಗಳು, ಮೂರುಸಾವಿರ ಮಠದ ಶಾಂತಕುಮಾರ ದೇವರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಈ ವೇಳೆಯಲ್ಲಿ ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಚನ್ನವೀರೇಶ್ವರ ವಿರಕ್ತಮಠದಲ್ಲಿ ಅನ್ನಸಂತರ್ಪಣೆ ನೆರವೇರಿತು.
ಅಕ್ಕಿಆಲೂರ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸದ್ಭಕ್ತರು, ಭಕ್ತ ಮಂಡಳಿ ಸದಸ್ಯರು ಜಾತ್ರಾ ಮಹೋತ್ಸವದ ಪಾಲ್ಗೊಂಡಿದ್ದರು.