ಸನಾ (ಎಎಫ್ಪಿ/ ಐಎಎನ್ಎಸ್): 33 ವರ್ಷಗಳಿಂದ ನಿರಂಕುಶ ಆಡಳಿತ ನಡೆಸುತ್ತಿರುವ ಯಮೆನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಅವರು ಪದತ್ಯಾಗ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದು ‘ಚುನಾವಣೆಯ ಮೂಲಕ’ ಮಾತ್ರ ತಮ್ಮ ಅಧಿಕಾರದಿಂದ ಕೆಳಗಿಳಿಸಬಹುದು ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಪ್ರಜಾತಂತ್ರ ಸ್ಥಾಪನೆಗಾಗಿ ಯಮೆನ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಸೋಮವಾರ ನಡೆದ ಸೇನಾ ದಾಳಿಯಲ್ಲಿ ಯುವಕನೊಬ್ಬ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ನವದೆಹಲಿ ವರದಿ, (ಪಿಟಿಐ): ಯೆಮನ್ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಆ ದೇಶದಲ್ಲಿ ಪ್ರಯಾಣ ಮಾಡದಿರಲು ಭಾರತೀಯರಿಗೆ ಸಲಹೆ ನೀಡಲಾಗಿದೆ. ಅಲ್ಲಿ ನೆಲೆಸಿರುವ 14,000 ಭಾರತೀಯರು ಸುರಕ್ಷಿತವಾಗಿದ್ದಾರೆಂದು ಕೇಂದ್ರ ಸರ್ಕಾರ ಹೇಳಿದೆ.