ಬಂಗಾರಪೇಟೆ: ತಮಿಳುನಾಡಿನ ಪಡಿತರ ಅಕ್ಕಿ ಅಕ್ರಮವಾಗಿ ಪಟ್ಟಣಕ್ಕೆ ಸಾಗಣೆ ಆಗುತ್ತಿರುವುದನ್ನು ತಡೆಯವ ಸಲುವಾಗಿ ತಮಿಳುನಾಡು ಪೊಲೀಸರು ಬುಧವಾರ ಬಂಗಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಗೌಪ್ಯವಾಗಿ ಸಭೆ ನಡೆಸಿ, ಅಕ್ರಮವಾಗಿ ಗಡಿಯೊಳಕ್ಕೆ ಬರುವ ಅಕ್ಕಿಯನ್ನು ಖರೀದಿಸದಂತೆ ಅಕ್ಕಿ ಗಿರಣಿ ಮಾಲೀಕರಿಗೆ ಸೂಚಿಸಿದ್ದಾರೆ.
ತಮಿಳುನಾಡಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಶೇಷ ವರಿಷ್ಠಾಧಿಕಾರಿ ಸ್ವಾಮಿನಾಥನ್ ನೇತೃತ್ವದಲ್ಲಿ ಸಭೆ ನಡೆದಿದೆ.
ತಮಿಳುನಾಡು ಸರ್ಕಾರ ಬಡವರಿಗೆ ತಿಂಗಳಿಗೆ 38 ಸಾವಿರ ಟನ್ ಕುಸುಬಲ ಅಕ್ಕಿ ಉಚಿತವಾಗಿ ನೀಡುತ್ತಿದೆ. ಹಲ ಮಾರ್ಗಗಳ ಮೂಲಕ ಈ ಅಕ್ಕಿ ಬಂಗಾರಪೇಟೆಗೆ ಸೇರುತ್ತಿದೆ. ತಮಿಳುನಾಡಿನಲ್ಲಿ ಕಡಿಮೆ ದರಕ್ಕೆ ಕೊಂಡು ಅದೇ ಅಕ್ಕಿಯನ್ನು ಗಿರಣಿಯಲ್ಲಿ ಪಾಲಿಷ್ ಮಾಡಿ 25ರಿಂದ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ದಂಧೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದೇಶದ ಅನ್ವಯ ಅಕ್ಕಿ ಗಿರಣಿ ಮಾಲೀಕರ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದು ಸ್ವಾಮಿನಾಥನ್ ತಿಳಿಸಿದರು.
ಅಕ್ರಮವಾಗಿ ಅಕ್ಕಿ ಸಾಗಣೆ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದು, ಇಂಥ ಕೃತ್ಯಗಳು ನಡೆಯದಂತೆ ಅಕ್ಕಿ ಗಿರಣಿ ಮಾಲೀಕರು ಸಹಕರಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು ಎಂದು ಸಿಪಿಐ ವೆಂಕಟಾಚಲಪತಿ ತಿಳಿಸಿದರು. ಅಕ್ರಮ ಅಕ್ಕಿ ಸಾಗಣೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಪಟ್ಟಣದ ವ್ಯಕ್ತಿಯೊಬ್ಬರನ್ನು ತಮಿಳುನಾಡು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ವಿಶೇಷ ವರಿಷ್ಠಾಧಿಕಾರಿ ಸ್ವಾಮಿನಾಥನ್ ಅವರೊಂದಿಗೆ ಇಬ್ಬರು ಡಿವೈಎಸ್ಪಿ, 15 ಮಂದಿ ಪೊಲೀಸರು ಸೇರಿದಂತೆ ಒಟ್ಟು 21ಸಿಬ್ಬಂದಿ ಇದ್ದರು.