ಬೀದರ್: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ ಅವರ ವಿರುದ್ಧ ಅವಿಶ್ವಾಸ ಪ್ರಸ್ತಾವ ಮಂಡಿಸುವುದಕ್ಕಾಗಿ ಫೆಬ್ರುವರಿ 23 ರಂದು ಬೆಳಿಗ್ಗೆ 11 ಗಂಟೆಗೆ ವಿಶೇಷ ಸಭೆ ಕರೆಯಲಾಗಿದೆ.
ಗಾದಗಿ ಈಗಾಗಲೇ ತಮ್ಮ ರಾಜೀನಾಮೆ ಸಲ್ಲಿಸಿದ್ದರೂ ಅವರ ವಿರುದ್ಧ ಅವಿಶ್ವಾಸ ಸಭೆ ಕರೆಯುವಂತೆ ಜಿಲ್ಲಾ ಪಂಚಾಯಿತಿಯ 16 ಜನ ಸದಸ್ಯರು ಶುಕ್ರವಾರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿ ಅವರು ವಿಶೇಷ ಸಭೆ ಕರೆದಿದ್ದಾರೆ.
ಅವಿಶ್ವಾಸ ಪ್ರಸ್ತಾವ ಸಭೆ ಕರೆಯುವಂತೆ ಈ ಹಿಂದೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ, 15 ದಿನ ಕಳೆದರೂ ಸಭೆ ಕರೆಯಲಾಗಿಲ್ಲ.
ಹೀಗಾಗಿ ಪಕ್ಷದ ಆದೇಶದಂತೆ ಮತ್ತೆ ಅವಿಶ್ವಾಸ ಸಭೆ ಕರೆಯುವಂತೆ ಮನವಿ ಸಲ್ಲಿಸಿದರು.
ಕುಶಾಲ ಪಾಟೀಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಸಾಮಾನ್ಯ ಸಭೆಯ ನಿರ್ಣಯಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಅವಿಶ್ವಾಸಕ್ಕೆ ಮನವಿ ಸಲ್ಲಿಸಿದವರಲ್ಲಿ ಸದಸ್ಯರಾದ ಸಂಗೀತಾ ಪಾಟೀಲ್, ರಾಜಶ್ರೀ ಪಾಟೀಲ್, ಪ್ರಭುಶೆಟ್ಟಿ ಮೆಂಗಾ, ಶ್ರೀದೇವಿ ಪಾಟೀಲ್, ವೆಂಕಟ ಶರಣಪ್ಪ, ಬಾಬುರಾವ ಶಂಕರರಾವ, ಕಾಶಿನಾಥ ಜಾಧವ್, ದೀಪಿಕಾ ರಾಠೋಡ್, ಧೂಳಪ್ಪ ಸೂರಂಗೆ, ನೀಲಮ್ಮ ವಡ್ಡೆ, ಲತಾ ಶಾಂತಕುಮಾರ, ಚಂದ್ರಶೇಖರ ಪಾಟೀಲ್, ಸಂತೋಷಮ್ಮ ಪುಂಡಲೀಕರಾವ, ಜಗದೇವಿ ಝರಣಪ್ಪ, ಡಾ. ಶೈಲೇಂದ್ರ ಬೆಲ್ದಾಳೆ, ರವೀಂದ್ರ ರೆಡ್ಡಿ ಮತ್ತಿತರರು ಸೇರಿದ್ದಾರೆ.
ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಕಲ್ಲೂರು, ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಮತ್ತಿತರರು ಸದಸ್ಯರೊಂದಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.