ಚಿಕ್ಕೋಡಿ: ಜೀವನದಲ್ಲಿ ಧಾರ್ಮಿಕ ವಿಚಾರ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡ ವ್ಯಕ್ತಿ ಕಠಿಣ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ಬದುಕಬಲ್ಲನು ಎಂದು ಶ್ರೀಶೈಲ ಪೀಠದ ಡಾ. ಚೆನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ `ದಾನಮ್ಮ ದೇವಿ ಚರಿತ್ರೆ~ ಕುರಿತು ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಔದ್ಯೋಗಿಕ ಮತ್ತು ಗಣಕೀಕರಣದ ಇಂದಿನ ದಿನಮಾನಗಳಲ್ಲಿ ಮನುಷ್ಯ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತ್ದ್ದಿದಾನೆ. ಸುಖ, ಶಾಂತಿ, ನೆಮ್ಮದಿ ಮರೀಚಿಕೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಎದುರಾಗುವ ಎಡರು ತೊಡರುಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಲು ಆಧ್ಯಾತ್ಮಿಕ ಶಕ್ತಿ ಪೂರಕ ಎಂದರು. ಶಾಸಕ ಮಹಾಂತೇಶ ಕವಟಗಿಮಠ ಮಾತನಾಡಿದರು.
ಒಂದು ತಿಂಗಳಪರ್ಯಂತ ಪ್ರವಚನ ನೀಡಿದ ನಿಡಸೋಸಿಯ ಶೋಭಾತಾಯಿ ಹಿರೇಮಠ, ಜಮಖಂಡಿಯ ಗೌರಿಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಅಜಿತ ದೇಸಾಯಿ, ಸಂಚಾಲಕರಾದ ತಾತ್ಯಾಸಾಬ ಕಾಟೆ, ಕಲ್ಲಪ್ಪ ಮೈಶಾಳೆ, ಮಲ್ಲಿಕಾರ್ಜುನ ಕೋರೆ, ಸುರೇಶ ಪಾಟೀಲ, ಅಪ್ಪಾಸಾಹೇಬ ಕುಠೋಳೆ, ಬೀರೇಶ್ವರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಯಾನಂದ ಜಾಧವ, ಕಲ್ಲಪ್ಪಾ ಕೋರೆ, ಸದಾನಂದ ಚಿಕಲಿ, ವಿವೇಕಾನಂದ ಕಮತೆ ಉಪಸ್ಥಿತರಿದ್ದರು. ಪ್ರೊ. ಸುಬ್ಬರಾವ ಎಂಟೆತ್ತಿನವರ ಸ್ವಾಗತಿಸಿದರು. ಅಣ್ಣಾಸಾಹೇಬ ಜಕಾತೆ ವಂದಿಸಿದರು.