ಬೆಳಗಾವಿ: ದೇವರ ಹೆಸರಲ್ಲಿ ಮೂಢ ನಂಬಿಕೆಗಳನ್ನು ಪ್ರಚೋದಿಸುವ ಕಾರ್ಯ ನಗರದ ಅನಗೋಳದಲ್ಲಿ ನಡೆಯುತ್ತಿದ್ದು, ಲಕ್ಷ್ಮಿ ಉತ್ಸವ ಹೆಸರಲ್ಲಿ ಸಾವಿರಾರು ಪ್ರಾಣಿ ಬಲಿ ನೀಡಲಾಗುತ್ತದೆ. ಕಾರಣ ಈ ಉತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಶುಕ್ರವಾರ ಸ್ಥಳೀಯ ಕೆಲ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈಚೆಗೆ ಮಂಗಳದೇವಿ ಉತ್ಸವವನ್ನು ಅನಗೋಳದಲ್ಲಿ ಸುಮಾರು 15 ದಿನಗಳ ಕಾಲ ನಡೆಸಿರುವ ಸ್ಥಳೀಯ ನಾಗರಿಕರು ಸಾಕಷ್ಟು ಸಾಲ ಮಾಡಿದ್ದಾರೆ. ಇಂತಹ ಉತ್ಸವಗಳನ್ನು ಸ್ಥಳೀಯ ಹಣಕಾಸು ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳುತ್ತಿವೆ. ನಾಗರಿಕರು ಉತ್ಸವದ ಹೆಸರಲ್ಲಿ ಸಾಲ ಮಾಡಿ ತೊಂದರೆಗೀಡಾದ ಪ್ರಸಂಗಗಳೂ ಇದೆ ಎಂದು ಅವರು ಆರೋಪಿಸಿದರು.
ಉತ್ಸವ ಸಂದರ್ಭದಲ್ಲಿ ಸಂಚಾರಿ ನಿಯಮ ಉಲ್ಲಂಘನೆ, ನೀರು, ಆರೋಗ್ಯ ಸಮಸ್ಯೆಗಳೆಲ್ಲ ಉಂಟಾಗುತ್ತಿದ್ದು, ಯಾವುದೇ ಕಾರಣಕ್ಕೂ ಇಂತಹ ಉತ್ಸವಗಳಿಗೆ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಅವರು ಮನವಿ ಮಾಡಿಕೊಂಡರು.
ಇದರ ನೇತೃತ್ವವನ್ನು ಸಂಭಾಜಿ ಚವಾಣ, ಕಿರಣ ಸಾಯಿನಾಕ, ರತನ್ ಮಿರಜಕರ, ವಿ.ವಿ.ಕಾಖಂಡಕರ, ಗುಂಡು ಕಮ್ಮಾರ, ವಸಂತ ತಹಸೀಲ್ದಾರ ಮತ್ತಿತರರು ವಹಿಸಿದ್ದರು.