ಮದ್ದೂರು: ಇಲ್ಲಿಗೆ ಸಮೀಪದ ಸೊಳ್ಳೇ ಪುರದಲ್ಲಿ ಕಿಡಿಗೇಡಿಗಳು ಅನಾಮ ಧೇಯ ಧ್ವಜವೊಂದನ್ನು ಹಾರಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಗ್ರಾಮಸ್ಥರಲ್ಲಿ ಕೆಲವು ಕಾಲ ಅವಾಂತರ ಸೃಷ್ಟಿಸಿದ ಘಟನೆ ಜರುಗಿದೆ. ಕೆಂಪು- ನೀಲಿ ಬಣ್ಣವನ್ನೊಳ ಗೊಂಡಿದ್ದು, ಧ್ವಜದ ಮೇಲೆ ಆರು ಬಿಳಿಯ ಬಣ್ಣದ ನಕ್ಷತ್ರಗಳಿರುವ ಧ್ವಜ ವನ್ನು ಗ್ರಾಮದ ಗಾಂಧಿ ವೃತ್ತದ ಕನ್ನಡ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದು, ಧ್ವಜಸ್ತಂಭದ ಅಡಿಯಲ್ಲಿ ಹೂವು ಗಳನ್ನು ಹರಡಿರುವುದು ಕಂಡು ಬಂದಿದೆ.
ಸೊಳ್ಳೇಪುರದಲ್ಲಿ ಪಾಕಿಸ್ತಾನಕ್ಕೆ ಸೇರಿದ ಧ್ವಜ ಹಾರಿಸಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಗುಂಪುಗೂಡಿದ ವಳೆಗೆರೆಹಳ್ಳಿ, ರಾಂಪುರ ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಅಶೋಕ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಧ್ವಜವನ್ನು ಪರಿಶೀಲಿಸಿದರು. ‘ಇದು ಪಾಕಿಸ್ತಾನದ ಧ್ವಜವಲ್ಲ. ಗ್ರಾಮದಲ್ಲಿ ಕೋಮುಗಲಭೆ ಹಾಗೂ ಅಶಾಂತಿ ಸೃಷ್ಟಿಸುವ ಸಲುವಾಗಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಅಂತಹ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಪ್ರಶಾಂತ್, ಪಿಎಸ್ಐ ಗಂಗಾಧರ್ ಅನಾಮಧೇಯ ಧ್ವಜವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಪಡಿಸಿ, ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಶೀಘ್ರ ಪತ್ತೆ ಹಚ್ಚಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.