ಹೊಸಕೋಟೆ: ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಾತ್ರಿ ವೇಳೆ ವಿದ್ಯುತ್ ನಿಲುಗಡೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಮಂಗಳವಾರ ಇಲ್ಲಿನ ಬೆಸ್ಕಾಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂತು. ‘ಹಗಲು ಹೊತ್ತಿನಲ್ಲಿ 4 ಗಂಟೆ ಮಾತ್ರ ಮೂರು ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
ಮಾಲೂರು ವಿದ್ಯುತ್ ವಿತರಣಾ ಕೇಂದ್ರದ ಬದಲು ಏಕರಾಜಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸಕೋಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಮಾಡಬೇಕು. ದೊಡ್ಡಗಟ್ಟಿಗನಬ್ಬೆ ಸುತ್ತಮುತ್ತಲ ಹಳ್ಳಿಗಳಿಗೆ ಮಂಜೂರಾಗಿರುವ ನಿರಂತರ ಜ್ಯೋತಿ ಯೋಜನೆ ಕಾಮಗಾರಿ ತಕ್ಷಣ ಕೈಗೊಳ್ಳಬೇಕು. ನಗರ ಪ್ರದೇಶದ-ವರಿಗೆ ಕೊಡುವಷ್ಟೇ ವಿದ್ಯುತ್ ಅನ್ನು ಗ್ರಾಮಾಂತರ ಪ್ರದೇಶಕ್ಕೂ ನೀಡಬೇಕು ಎಂದರು.
ಬೆಸ್ಕಾಂ ಮುಖ್ಯ ಎಂಜಿನಿಯರ್ ಉದಯಕುಮಾರ್, ‘ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.
ರೈತ ಮುಖಂಡರಾದ ದೊಡ್ಡಹುಲ್ಲೂರು ರಾಜಗೋಪಾಲ್, ಮುನಿರಾಜು, ಭಗವಂತಪ್ಪ, ಕೊಳತೂರು ಹನುಮಂತೇಗೌಡ, ಮರಿಯಪ್ಪ ಉಪಸ್ಥಿತರಿದ್ದರು.
11ರಿಂದ ಕ್ರಿಕೆಟ್ ಪಂದ್ಯಾಟ
ಪಟ್ಟಣದ ಅಣ್ಣಮ್ಮದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಇದೇ 11 ರಿಂದ 14 ರ ವರೆಗೆ ನಡೆಯಲಿದೆ.
ವಿಜೇತ ತಂಡಕ್ಕೆ ₨50,000 ಹಾಗೂ ದ್ವಿತೀಯ ಸ್ಥಾನಿ ತಂಡಕ್ಕೆ ₨25,000 ನೀಡಲಾಗುವುದು. ಹೆಸರು ನೋಂದಣಿಗೆ ಜ.4 ಕಡೆಯ ದಿನ. ಹೆಚ್ಚಿನ ವಿವರಗಳಿಗೆ ಎಚ್.ಟಿ.ವೆಂಕಟೇಶ್ ಮೊಬೈಲ್ ಸಂಖ್ಯೆ. 9916679367 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.