ಬೆಂಗಳೂರು: ನಗರದ ಪುಟ್ಟೇನಹಳ್ಳಿ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ಜಯನಗರದ ಸುಂದರ್ (34), ವಿಶ್ವನಾಥ್ (41) ಮತ್ತು ಗೊಟ್ಟಿಗೆರೆಯ ರವಿಕುಮಾರ್ (24) ಗಾಯಗೊಂಡವರು. ನಗರದ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿರುವ ಸುಂದರ್ ಮತ್ತು ವಿಶ್ವನಾಥ್ ಕಾರಿನಲ್ಲಿ ವಿಹಾರಕ್ಕೆ ಹೊರಟಿದ್ದ ವೇಳೆ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರು ರವಿಕುಮಾರ್ ಅವರು ಹೋಗುತ್ತಿದ್ದ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ನಂತರ ಕಾರು ಸಮೀಪದ ಕಾಪೌಂಡ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸುಂದರ್ ತಲೆಗೆ ತೀವ್ರ ಪೆಟ್ಟಾಗಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವನಾಥ್ ಹಾಗೂ ರವಿಕುಮಾರ್ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ವೇಳೆ ವಿಶ್ವನಾಥ್ ಮದ್ಯಪಾನ ಮಾಡಿದ್ದರೇ ಎಂಬುದು ವೈದ್ಯಕೀಯ ಪರೀಕ್ಷೆ ಬಂದ ನಂತರ ಗೊತ್ತಾಗಲಿದೆ ಎಂದು ಹುಳಿಮಾವು ಸಂಚಾರ ಪೊಲೀಸರು ತಿಳಿಸಿದ್ದಾರೆ.