ಬೆಂಗಳೂರು: ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿ ಐವರು ಪಾದಚಾರಿಗಳ ಸಾವಿಗೆ ಕಾರಣನಾದ ಆರೋಪ ಹೊತ್ತ ಕಾರ್ತೀಕ್ ಸೋಮಯ್ಯ ವಿರುದ್ಧ ದಾಖಲಾದ ಪ್ರಕರಣ ರದ್ದತಿಗೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಇಂದಿರಾನಗರದಲ್ಲಿ 2009ರ ಜನವರಿಯಲ್ಲಿ ಘಟನೆ ನಡೆದಿತ್ತು. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ 304ನೇ ಕಲಮಿನಡಿ (ಉದ್ದೇಶಪೂರ್ವಕವಾಗಿ ನಡೆದ ಕೊಲೆಯಲ್ಲ) ಪ್ರಕರಣ ದಾಖಲು ಮಾಡಲಾಗಿದೆ. ಇದರ ಅಡಿ ಜೀವಾವಧಿ ಶಿಕ್ಷೆಯೂ ಆಗಬಹುದಾದ ಕಾರಣ, ಇದರ ರದ್ದತಿಗೆ ಆದೇಶಿಸುವಂತೆ ಕೋರಿದ್ದನು. ತಾನು ಅಪಘಾತವನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎನ್ನುವುದು ಅವನ ವಾದ.
ಈ ಮನವಿಯನ್ನು ಕೋರ್ಟ್ ಕಳೆದ ವರ್ಷ ತಿರಸ್ಕರಿಸಿತ್ತು. ಈ ಆದೇಶವನ್ನು ಪುನರ್ಪರಿಶೀಲಿಸುವಂತೆ ಆತ ಕೋರಿದ್ದ. ಆದರೆ ಮನವಿಗೆ ಕೋರ್ಟ್ ಮಾನ್ಯ ಮಾಡಲಿಲ್ಲ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಕಾರ್ತೀಕ್, ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಬೆಳಗಿನ ವಾಯುವಿಹಾರಕ್ಕಾಗಿ ಐವರು ಹಿರಿಯ ನಾಗರಿಕರು ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಮಾಡಿದ ಆರೋಪವಿದೆ.