ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಅಪಾರ್ಟ್ಮೆಂಟ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೆಬ್ಬಾಳದಲ್ಲಿ ಶನಿವಾರ ರಾತ್ರಿ ನಡೆದಿದೆ.
ಕೋಲ್ಕತ್ತ ಮೂಲದ ಅಭಿಷೇಕ್ ಘೋಷ್ (28) ಮೃತರು. ಅವರು ಬಳ್ಳಾರಿ ರಸ್ತೆ ಬಳಿ ಇರುವ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅಭಿಷೇಕ್ ಸ್ನೇಹಿತರೊಂದಿಗೆ ಹೆಬ್ಬಾಳದ ಸೇವಾಶ್ರಮ ರಸ್ತೆಯ ಶ್ರೀರಾಮ ಸೃಷ್ಟಿ ಅಪಾರ್ಟ್ಮೆಂಟ್ನ ಮೊದಲ ಅಂತಸ್ತಿನ ಫ್ಲಾಟ್ನಲ್ಲಿ ವಾಸವಾಗಿದ್ದರು.
ನಗರದಲ್ಲಿ ರಾತ್ರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಅಪಾರ್ಟ್ಮೆಂಟ್ನ ಎಂಟನೇ ಮಹಡಿಗೆ ಹೋಗಿದ್ದ ಅವರು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
`ಅಭಿಷೇಕ್ಗೆ ಛಾಯಾಚಿತ್ರ ತೆಗೆಯುವ ಹವ್ಯಾಸವಿತ್ತು. ಈ ಹಿನ್ನೆಲೆಯಲ್ಲಿ ಆತ ಮಳೆಯ ಛಾಯಾಚಿತ್ರ ತೆಗೆಯಲು ಪರಿಸ್ಥಿತಿ ಅನುಕೂಲಕರವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ಬರುತ್ತೇನೆಂದು ಹೇಳಿ ಅಪಾರ್ಟ್ಮೆಂಟ್ನ ಮಹಡಿಗೆ ಹೋಗಿದ್ದ~ ಎಂದು ಅಭಿಷೇಕ್ ಅವರ ಫ್ಲಾಟ್ನಲ್ಲೇ ನೆಲೆಸಿರುವ ಗೋಯಲ್ ಅವರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅವರು ಅಪಾರ್ಟ್ಮೆಂಟ್ನಿಂದ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕೋಲ್ಕತ್ತದಲ್ಲಿರುವ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ನಗರಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.ಹೆಬ್ಬಾಳ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.