ವಿಜಾಪುರ: ಇಲ್ಲಿಯ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಇದೇ 24ರಂದು ನಡೆಯಲಿದ್ದು, ಮೊದಲ ಹಂತದ ಕಾಮಗಾರಿಯಷ್ಟೇ ಪೂರ್ಣಗೊಂಡಿರುವ ಶಾಲೆಯ ಒಳಾಂಗಣ ಕ್ರೀಡಾಂಗಣವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ.
‘ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಅಪೂರ್ಣವಾಗಿದೆ. ಯಾವ ಆಟಕ್ಕೂ ಅಲ್ಲಿ ಸೌಲಭ್ಯ ಕಲ್ಪಿಸಿಲ್ಲ. ಕಟ್ಟಡದ ಹಸ್ತಾಂತರ, ಗುಣಮಟ್ಟದ ಪರೀಕ್ಷೆ ಆಗಿಲ್ಲ. ಆದರೂ ಅಲ್ಲಿಗೆ ರಾಷ್ಟ್ರಪತಿಗಳನ್ನು ಕರೆದುಕೊಂಡು ಹೋಗಿ ಅವರಿಂದ ಉದ್ಘಾಟನೆ ಮಾಡಿಸಲಾಗುತ್ತಿದೆ’ ಎಂಬ ಆರೋಪ ಕೇಳಿ ಬಂದಿದೆ.
‘ಒಳಾಂಗಣ ಕ್ರೀಡಾಂಗಣದ ಒಟ್ಟಾರೆ ಯೋಜನಾ ಮೊತ್ತ ₨ 4 ಕೋಟಿ. ಸೈನಿಕ ಶಾಲೆಯವರು ನಮಗೆ ₨ 2 ಕೋಟಿ ನೀಡಿದ್ದು, ಅವರು ಅನುಮೋದಿಸಿದ ನಕ್ಷೆಯಂತೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿ ಸಿದ್ದೇವೆ’ ಎನ್ನುವುದು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋ ಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಬಿ. ಪಾಟೀಲ ವಿವರಣೆ.
‘ಕ್ರೀಡಾಂಗಣದ ಅರ್ಧ ವೃತ್ತಾಕಾರದ ಮೇಲ್ಛಾವಣಿಯ ನಿರ್ಮಾಣ, ಕಟ್ಟಿಗೆಯ ನೆಲಹಾಸು ಮತ್ತಿತರ ಸೌಲಭ್ಯಗಳನ್ನು ಎರಡನೇ ಹಂತದ ಯೋಜನೆಯಲ್ಲಿ ಪೂರ್ಣ ಗೊಳಿಸಲಾಗುವುದು. ಕಟ್ಟಡ ಹಸ್ತಾಂತರವೂ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳು ನಂತರದ ಹಂತದಲ್ಲಿ ನಡೆಯುತ್ತವೆ. ಇಲ್ಲಿ ಶಿಷ್ಟಾಚಾರ–ಸುರಕ್ಷತೆಯ ನಿಯಮಗಳ ಉಲ್ಲಂಘನೆ ಆಗಿಲ್ಲ’ ಎಂದು ಅವರು ಸಮಜಾಯಿಷಿ ನೀಡಿದರು.
‘ನಮ್ಮ ಶಾಲೆಯ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ಭೇಟಿ ನೀಡುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಒಳಗಾಂಗಣ ಕ್ರೀಡಾಂಗಣವನ್ನು ಅವರಿಂದ ಉದ್ಘಾಟಿಸುತ್ತಿದ್ದೇವೆ’ ಎಂದು ಸೈನಿಕ ಶಾಲೆ ಮೂಲಗಳು ತಿಳಿಸಿವೆ.