ಶ್ರೀನಗರ, (ಪಿಟಿಐ): ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರಗಾಮಿ ಅಫ್ಜಲ್ ಗುರುಗೆ ಕ್ಷಮಾದಾನ ನೀಡುವಂತೆ ಒತ್ತಾಯಿಸಿ ಪಕ್ಷೇತರ ಶಾಸಕರೊಬ್ಬರು ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ.
ಮಾನವೀಯ ನೆಲೆಯಲ್ಲಿ ಗುರುಗೆ ಕ್ಷಮಾದಾನ ನೀಡುವಂತೆ ಕುಪ್ವಾರ ಜಿಲ್ಲೆಯ ಲಾಂಗೇಟ್ ಕ್ಷೇತ್ರದ ಶಾಸಕ ಶೇಖ್ ಅಬ್ದುಲ್ ರಶೀದ್ ಒತ್ತಾಯಿಸಿದ್ದಾರೆ. ಗುರುವನ್ನು ಗಲ್ಲಿಗೇರಿಸಿದರೆ ಕಾಶ್ಮೀರದಲ್ಲಿ ಗಂಭೀರ ಪರಿಸ್ಥಿತಿ ತಲೆದೋರಬಹುದು. ಹಾಗಾಗಿ ವಿಧಾನಸಭೆ ಈ ಕುರಿತು ನಿರ್ಣಯ ಕೈಗೊಳ್ಳುತ್ತದೆಂಬ ನಿರೀಕ್ಷೆ ಇದೆ ಎಂದಿದ್ದಾರೆ.
ಈ ನಡುವೆ, ಅಫ್ಜಲ್ ವಿಷಯದಲ್ಲಿ ವಿವಾದಿತ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರನ್ನು ಅವರ ತಂದೆ ಹಾಗೂ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲ ಬೆಂಬಲಿಸಿದ್ದಾರೆ.