ಹಲಗೂರು: ಭರಚುಕ್ಕಿ ಜಲ ಪಾತೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ಅಂಬರೀಷ್ ಅವರನ್ನು ಹಲಗೂರಿನಲ್ಲಿ ಭಾನುವಾರ ಅಂಬಿ ಪ್ರಿಯ ಸ್ನೇಹ ಬಳಗದ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಟ್ಟರು.
ಹಲಗೂರು ಮಾರ್ಗವಾಗಿ ಅಂಬರೀಷ್ ಆಗಮಿಸುತ್ತಿರುವುದನ್ನು ಅರಿತ ಅಭಿಮಾನಿಗಳು ಮತ್ತು ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಅಂಬರೀಷ್ ಆಗಮನಕ್ಕಾಗಿ ಕಾದರು. ಅಂಬರೀಷ್ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದನ್ನು ನಿರೀಕ್ಷಿಸದ ಅಂಬರೀಷ್ ಕೆಲ ಸಮಯ ಬೇಸ್ತು ಬಿದ್ದರು. ಅಭಿಮಾನಿಗಳ ಕೋರಿಕೆ ಮೇರೆಗೆ ಕಾರು ಇಳಿದು ಹಾರ, ತುರಾಯಿಗೆ ಕೊರಳೊಡ್ಡಿದರು. ಹಾರ ಹಾಕಲು ನೂಕು ನುಗ್ಗಲು ಉಂಟಾಯಿತು. ಅಭಿಮಾನಿಗಳನ್ನು ಸಂತೈಸಲು ಪೊಲೀಸರು ಹರಸಾಹಸ ಪಟ್ಟರು.
ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜು, ಲಿಂಗಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಗಂಗಾಧರ್, ಹಲಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಿ. ರಾಜು, ಅಂಬಿ ಪ್ರಿಯ ಸ್ನೇಹ ಬಳಗದ ಅಧ್ಯಕ್ಷ ಉಮೇಶ್ ಡಿ. ಗೌಡ, ಉಪಾಧ್ಯಕ್ಷ ಸುರೇಶ್, ಯುವಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೇಗಿಲಯೋಗಿ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಎಚ್.ಆರ್. ಪದ್ಮನಾಭ, ಎಸ್.ಟಿ.ಡಿ. ಕುಮಾರ್, ದುನಿಯಾ ಜಮೀರ್, ಆರ್. ಗಂಗಾಧರ್ ಇತರರು ಇದ್ದರು.