ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಸಾಲದು; ದೇವೇಗೌಡ ಅಸಮಾಧಾನ

Last Updated 18 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ಹಾಸನ: `ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ನನಗೆ ಸಮಾಧಾನ ತಂದಿಲ್ಲ. ಕೆಲವೇ ಕೆಲವು ಯೋಜನೆಗಳನ್ನು ಬಿಟ್ಟರೆ ಉಳಿದವು ಶೇ.3 ರಿಂದ ಗರಿಷ್ಠ ಶೇ 12 ರವರೆಗೂ ಪ್ರಗತಿಕಂಡಿವೆ. ಅಭಿವೃದ್ಧಿಯ ವೇಗ ಹೆಚ್ಚಾಗಬೇಕು~ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಪತ್ರಕರ್ತರೊಡನೆ ಮಾತನಾಡಿದರು.

`ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುವ ಹಣ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಉದ್ಯೋಗ ಖಾತ್ರಿ ಯೋಜನೆ ಶೇ 8ರಷ್ಟು ಮಾತ್ರ ಪ್ರಗತಿ ಕಂಡಿದೆ. ಅನೇಕ ಯೋಜನೆಗಳು ಶೇ 3ಕ್ಕಿಂತ ಕಡಿಮೆ ಅಭಿವೃದ್ಧಿ ದಾಖಲಿಸಿವೆ. ಶೂನ್ಯ ಅಭಿವೃದ್ಧಿ ದಾಖಲಿಸಿದ ಇಲಾಖೆಗಳೂ ಇವೆ. ಅಭಿವೃದ್ಧಿ ಕುಂಠಿತಗೊಂಡಿರುವುದಕ್ಕೆ ಬರಿಯ ಅಧಿಕಾರಿಗಳನ್ನು ದೂರುತ್ತಿಲ್ಲ ಕೆಲವು ಯೋಜನೆಗಳಲ್ಲೇ ದೋಶವಿದೆ ಎಂದರು.

`ಆಕರ್ಷಕ ಯೋಜನೆ ರೂಪಿಸಿ ಅದರ ಜಾರಿ ಹಂತದಲ್ಲಿ ಕಠಿಣ ನಿಯಮಗಳನ್ನು ಮಾಡಿದಾಗ ಅಧಿಕಾರಿಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಿಂಜರಿಯುತ್ತಾರೆ. ಲೋಪಗಳಾದರೆ ನಾಳೆ ತಮ್ಮ ಮೇಲೆ ಆರೋಪ ಹೊರಿಸಿ ಕಾನೂನು ಕ್ರಮ ಕೈಗೊಳ್ಳಬಹುದೆಂಬ ಭಯದಿಂದ ಇಂಥ ಯೋಜನೆಗಳನ್ನು ಜಾರಿ ಮಾಡುವ ಗೋಜಿಗೇ ಹೋಗುವುದಿಲ್ಲ. ಇದು ಯೋಜನೆಯ ತೊಂದರೆಯೇ ವಿನಾ ಅಧಿಕಾರಿಗಳ ತಪ್ಪಾಗು–ವುದಿಲ್ಲ. ಇಂಥ ನಿಯಮಾವಳಿಗಳನ್ನು ಸಡಿಲಿಸುವುದು ಅಗತ್ಯ.

~ಇನ್ನೂ ಕೆಲವು ಯೋಜನೆಗಳಲ್ಲಿ ಹಣ ಬಿಡುಗಡೆ ವಿಳಂಬವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಆಗಿಲ್ಲ. ಕೇಂದ್ರ ಸರ್ಕಾರ ಗ್ರಾಮೀಣ ಸಡಕ್ ಯೋಜನೆ ರೂಪಿಸಿದ್ದರೆ, ರಾಜ್ಯ ಸರ್ಕಾರ ನಮ್ಮೂರು ನಮ್ಮ ರಸ್ತೆ ಎಂಬ ಯೋಜನೆ ರೂಪಿಸಿದೆ. ಈ ಎರಡೂ ಯೋಜನೆಗಳನ್ನು ಸೇರಿಸಿದರೆ ಸಾಕಷ್ಟು ಅಭಿವೃದ್ಧಿ ಮಾಡಬಹುದು. ಇಂಥ ಹಲವು ಉದಾಹರಣೆಗಳಿವೆ. ಕೇಂದ್ರ ಮತ್ತು ರಾಜ್ಯ ಯೋಜನೆಗಳನ್ನು ಸಂಯೋಜನೆ ಮಾಡಿಕೊಂಡು ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಾಕಷ್ಟು ಅವಕಾಶಗಳಿವೆ. ಆದರೆ ಹಾಗೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಚಿಂತನೆ ನಡೆಸಬೇಕು ಎಂದರು.

`ಹಾಸನ ಬೆಂಗಳೂರು ಹಾಗೂ ಅರಸೀಕೆರೆ ಬೀರೂರು ರೈಲ್ವೆ ಯೋಜನೆ ಮುಂದೆ ಹೋಗ–ದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತ, `ಈ ಯೋಜನೆಗಳಿಗೆ ಸಂಬಂಧಿಸಿದಂತೆ ಕಳೆದ 14 ವರ್ಷಗಳಲ್ಲಿ 1400 ಪತ್ರಗಳನ್ನು ಬರೆದಿರಬಹುದು. ಆದರೆ ಯೋಜನೆ ಜಾರಿಯಾಗುತ್ತಿಲ್ಲ ಎಂಬುದು ಬೇಸರ ತಂದಿದೆ. ಹಲವು ಸಚಿವರನ್ನು ಭೇಟಿಮಾಡಿದ್ದೇನೆ, 20ರಂದು ರೈಲ್ವೆ ಸಚಿವರು ಬೆಂಗಳೂರಿಗೆ ಬರಲಿದ್ದು, ಪುನಃ ಒತ್ತಾಯ ಮಾಡುತ್ತೇನೆ.

ಹಿಂದೆ ಪ್ರಧಾನಿಯನ್ನೇ ಭೇಟಿಮಾಡಿ ಮನವರಿಕೆ ಮಾಡಿದ್ದೆ. ನಾನು ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ. ನಮ್ಮ ಜಿಲ್ಲೆಗೆ ಅನುಕೂಲವಾಗುವ ನಾಲ್ಕೈದು ಯೋಜನೆಗಳನ್ನು ಮಂಜೂರು ಮಾಡಿಸಿಕೊಡಿ ಎಂದು ವಿನಂತಿಸಿದ್ದೆ. ಅದಕ್ಕೂ ಅವರು ಸ್ಪಂದಿಸಿಲ್ಲ. ಆದರೆ ಒಂದಲ್ಲ ಒಂದು ದಿನ ಈ ಯೋಜನೆಗಳ ಶಾಪ ವಿಮೋಚನೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ~ ಎಂದರು.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎಚ್.ಡಿ. ರೇವಣ್ಣ, ಜಿಲ್ಲೆಯಲ್ಲಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡದಿರುವುದು, ಶೈಕ್ಷಣಿಕ ಸಾಲ ನೀಡದಿರುವುದೇ ಮುಂತಾದ ಹಲವು ವಿಚಾರಗಳ ಬಗ್ಗೆ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. 

ಶಾಸಕ ಎಚ್.ಎಸ್. ಪ್ರಕಾಶ್, ಪುಟ್ಟೇಗೌಡ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಜನ್ ಕುಮಾರ್, ಅಪರ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಮತ್ತಿತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT