ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್, ಸೋನು ಗಾನ, ದೇವಾನಂದ್ ಧ್ಯಾನ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಿಶೋರ್ ಕುಮಾರ್, ರಫಿ ಹಾಡಿರುವ ಹಾಡುಗಳನ್ನು ಸಾವಿರ ಬಾರಿ ಕೇಳಿದರು ಕೂಡ ಮತ್ತೇ ಮತ್ತೇ ಕೇಳಬೇಕು ಎಂದು ಮನಸ್ಸು ತುಡಿಯುತ್ತದೆ. ಆ ಮಹಾನ್ ಕಂಠಸಿರಿಯ ಲಾಲಿತ್ಯ ಅಂತಹುದು. ಅನಂತರದಲ್ಲಿ ಪ್ರವರ್ಧಮಾನಕ್ಕೆ ಬಂದ ಸೋನು ನಿಗಂ ತಮ್ಮ ಕಂಠದ ಮುಖೇನ ಯುವ ಜನತೆಯಲ್ಲಿ ಕಿಚ್ಚು ಹಚ್ಚಿದ ಅಭಿಜಾತ ಕಲಾವಿದ.

ಬೆಂಗಳೂರಿಗರಿಗೆ ಸಂಗೀತವೆಂದರೆ ಕಣ್ಣು ಕಿವಿ ಎರಡು ತೆರೆದುಕೊಂಡು ಬಿಡುತ್ತದೆ. ಸಂಗೀತವನ್ನು ಇನ್ನಿಲ್ಲದಂತೆ ಆಸ್ವಾದಿಸುತ್ತಾರೆ. ಇಂತಹ ಕಲಾಪ್ರೇಮಿಗಳಿಗೆ ಸಂಗೀತ ದಾಹ ತಣಿಸುವ ಸಲುವಾಗಿಯೇ ನಗರದಲ್ಲಿ ಮೂರು ಭರ್ಜರಿ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

1950ರ ದಶಕದ ಹಾಡುಗಳನ್ನು ಕಿವಿದುಂಬಿಸಿಕೊಳ್ಳುವ ತವಕವಿರುವವರು ಅಮಿತ್ ಕುಮಾರ್ ಅವರ ಸಂಗೀತ ಕಛೇರಿಗೆ, ರೋಮ್ಯಾಂಟಿಕ್ ಹಾಡುಗಳನ್ನು ಇಷ್ಟಪಡುವವರು ದೇವಾನಂದ್ ನೆನಪಿನಲ್ಲಿ ಆಯೋಜಿಸಿರುವ `ಗಾತಾ ರಹೇ ಮೇರಾ ದಿಲ್~ ಕಾರ್ಯಕ್ರಮಕ್ಕೆ ಹಾಗೂ ಈ ದಶಕದ ಜನಪ್ರಿಯ ಮೆಲೋಡಿಯಸ್ ಹಾಡುಗಳನ್ನು ಇಷ್ಟಪಡುವವರು ಸೋನು ನಿಗಮ್ ಕಾರ್ಯಕ್ರಮಕ್ಕೆ ಹಾಜರಾಗಬಹುದು.
 
ಈ ಕಾರ್ಯಕ್ರಮಗಳು ಸಂಗೀತ ಪ್ರಿಯರಿಗೆ ರಸದೌತಣ ಒದಗಿಸಲಿವೆ. ಜನಪ್ರಿಯ ವ್ಯಕ್ತಿಗಳ ನೆನಪಿನಲ್ಲಿ ನಡೆವ ಈ ಕಾರ್ಯಕ್ರಮದಲ್ಲಿ ಸಂಗೀತದ ಹೊಳೆ ಝರಿಯಾಗಿ ಹರಿಯಲಿದೆ.

ಅಮಿತ್ ಕುಮಾರ್ ಬೆಂಗಳೂರಿಗೆ ಮತ್ತೆ ಬರುತ್ತಿದ್ದಾರೆ. ಚತುಷ್ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್, ಕಿಶೋರ್ ಕುಮಾರ್, ಎಸ್.ಡಿ.ಬರ್ಮನ್ ಹಾಗೂ ಆರ್.ಡಿ.ಬರ್ಮನ್ ಅವರ ಸವಿನೆನಪಿನಲ್ಲಿ  ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರ ಚಿಕ್ಕಪ್ಪ ಅಶೋಕ್ ಕುಮಾರ್ ಅವರ ಶತಮಾನೋತ್ಸವದ ಸವಿನೆನಪು ಕೂಡ ಇದಕ್ಕೆ ತಳುಕು ಹಾಕಿಕೊಂಡಿದೆ.

ಅಮಿತ್ ಅವರಿಗೆ ಸಾಥ್ ನೀಡಲು ಆರ್.ಡಿ.ಬರ್ಮನ್ ಅವರ ಗರಡಿಯಲ್ಲಿ ಪಳಗಿದ ಸೋಧಾ ಬ್ರದರ್ಸ್ ಜತೆಯಾಗಿದ್ದಾರೆ. ರಾಜ್ ಸೋಧಾ ಸ್ಯಾಕ್ಸಫೋನ್ ನುಡಿಸಿದರೆ, ರಾಜೇಂದ್ರ ಸಿಂಗ್ ಸೋಧಾ ಸ್ವರ್ರ‌್ಲಿನ್‌ನ  ಮೋಡಿ ಪ್ರದರ್ಶಿಸಲಿದ್ದಾರೆ.

ಸ್ವರ್ರ‌್ಲಿನ್‌ನಲ್ಲಿ ಪಳಗಿರುವ ರಾಜೇಂದ್ರ ಸಿಂಗ್ ಸೋಧಾ ಅವರ ಬೆಂಗಳೂರಿನ ಮೊದಲ ಕಾರ್ಯಕ್ರಮ ಇದು. ಕಿಶೋರ್ ಸೋಧಾ, ರಾಜ್ ಸೋಧಾ ಮತ್ತು ಫ್ರಾಂಕೋ ವಾಜ್ ಅವರು ಈ ಮೊದಲು ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಿದ್ದಾರೆ.
 
ಅಂದಹಾಗೆ ಡ್ರಮ್ಮರ್ ಫ್ರಾಂಕೋ ವಾಜ್ ಖ್ಯಾತ ಡ್ರಮ್ಮರ್ ಶಿವಮಣಿ ಅವರ ಗುರು ಕೂಡ ಹೌದು. ಜತೆಗೆ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೇ ಸೋನಿ ಟೀವಿಯಲ್ಲಿ ನಡೆದ ಮ್ಯೂಸಿಕಲ್ ಟ್ಯಾಲೆಂಟ್ ಶೋನಲ್ಲಿ ಭಾಗವಹಿಸಿದ್ದ ಖ್ಯಾತ ಮ್ಯೂಜಿಷಿಯನ್‌ಗಳು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಜನಾಕರ್ಷಕ ಗಾಯಕರಾದ ದಿವ್ಯಾ ರಾಘವನ್, ಬಿಜು ನಾಯರ್, ಸಿಂಚನ್ ದೀಕ್ಷಿತ್ ಹಾಗೂ ಅಮಿತ್ ಅವರ ಸಹೋದರಿ ಸ್ರೊಮೊನಾ ಅವರು ಕಾರ್ಯಕ್ರಮ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರಿಗೆ ಗಾಯಕರು ಹಾಡುವ ಹಾಡಿನ ಹಿನ್ನೆಲೆ, ಹಾಡಿನ ಇತಿಹಾಸ ಇವೆಲ್ಲವನ್ನು ತಿಳಿದುಕೊಳ್ಳುವ ಭಾಗ್ಯ ಕೂಡ ಲಭಿಸಲಿದೆ.

`ಥಂಡಿ ಹವಾ ಯೇ ಚಾಂದಿನಿ ಸುಹಾನಿ~ ಎಂಬ ರೊಮ್ಯಾಂಟಿಕ್ ಗೀತೆಯೊಂದಿಗೆ ಪ್ರಾರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಮನಸ್ಸು ಕಾಡುವ ಅನೇಕ ಹಾಡುಗಳ ಸುಧೆ ಹರಿಯಲಿದೆ. ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಈ ಗೀತೆಗಳು ಸಂಗೀತ ರಸಿಕರಿಗೆ ಇನ್ನಿಲ್ಲದ ಸಂತಸ ನೀಡಲಿದೆ.

ಈ ಕಾರ್ಯಕ್ರಮವನ್ನು ಮಾಮ್ ಎಂಟಟೈನ್‌ಮೆಂಟ್ ಆಯೋಜಿಸಿದ್ದು, ಟಿಕೆಟ್ ಬೆಲೆ ರೂ.660, 825, 1100 ಮತ್ತು 1650. ಟಿಕೆಟ್ ಬುಕಿಂಗ್‌ಗಾಗಿ 98454 47130. ಆನ್‌ಲೈನ್ ಬುಕಿಂಗ್‌ಗಾಗಿ www.indiastage.in

ಚರ್ಚ್ ಸ್ಟ್ರೀಟ್ (2559 2021), ಜಯನಗರ 4ನೇ ಹಂತ (2245 2368), ಮಲ್ಲೇಶ್ವರಂ (4128 2020), ಕೋರಮಂಗಲ (2206 7727), ಮಂತ್ರಿ ಮಾಲ್ (3016 0172)ನಲ್ಲಿ ಟಿಕೆಟ್ ದೊರೆಯುತ್ತವೆ. ಫೆಬ್ರುವರಿ 17ರಂದು ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾಹಿತಿಗೆ 98454 47130.

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಶನಿವಾರ (ಫೆ.11) ನಡೆಯಲಿದೆ. ಈ ಕಾರ್ಯಕ್ರಮವನ್ನು ಸುಜಾತ ಶ್ರೀನಾಥ್ ನಿಕ್ಕಂ ಅವರು ನಿಧಿ ಸಂಗ್ರಹಣೆ ಉದ್ದೇಶದಿಂದ ಆಯೋಜಿಸಿದ್ದಾರೆ. ಸಂಗ್ರಹವಾದ ಹಣವನ್ನು ಸೌಲಭ್ಯ ವಂಚಿತ ಮಕ್ಕಳು ಹಾಗೂ ವೃದ್ಧರಿಗೆ ಮನೆ ನಿರ್ಮಿಸಿ ಕೊಡಲು ಬಳಕೆ ಮಾಡಲಾಗುತ್ತದೆ.

ಸುಮಧುರ ಕಂಠದ ಗಾಯಕ ಸೋನು ನಿಗಂ ಕಾರ್ಯಕ್ರಮದ ಟಿಕೆಟ್ ಬೆಲೆ 300, 500, 1000 ಹಾಗೂ 2000. ಆನ್‌ಲೈನ್ ಬುಕಿಂಗ್‌ಗಾಗಿ www.bookmyshow.com

ಅಮಿಗೋಸ್ (ಎಎಂಐಸಿಒಎಸ್) ಸೃಜನಶೀಲ ಗಾಯಕರನ್ನು ಒಳಗೊಂಡಿರುವ ಸಂಗೀತ ತಂಡ. ಈ ತಂಡ ದೇಶದ ಹಲವಾರು ಭಾಷೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆಗಳಿಸಿದೆ. ಚಲನಚಿತ್ರಗೀತೆ, ಜನಪದ ಹಾಗೂ ದೇಶಭಕ್ತಿ ಬಿಂಬಿಸುವ ಗೀತೆಗಳನ್ನು ಹಾಡುವಲ್ಲಿ ಈ ತಂಡದ್ದು ಎತ್ತಿದ ಕೈ.
 
ವೀರ್ ಜವಾನ್ ತುಜೆ ಸಲಾಂ ಸಾರ್ವಜನಿಕ ಕಾರ್ಯಕ್ರಮ ಈ ತಂಡದ ಕೀರ್ತಿಯನ್ನು ಎಲ್ಲೆಡೆ ಪಸರಿಸಿತು. ಈ ತಂಡ ಈಗ ಎವರ್‌ಗ್ರೀನ್ ಹೀರೋ ದೇವ್‌ಆನಂದ್ ಅವರ ಸ್ಮರಣಾರ್ಥ ಭಾನುವಾರ (ಫೆ.19)ರಂದು `ಗಾತಾ ರಹೇ ಮೇರಾ ದಿಲ್~ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.

ಈ ಕಾರ್ಯಕ್ರಮದಲ್ಲಿ ಎವರ್‌ಗ್ರೀನ್ ಹೀರೋ ದೇವಾನಂದ್ ನಟಿಸಿದ ಚಿತ್ರಗಳ ಎವರ್‌ಗ್ರೀನ್ ಗೀತೆಗಳು ಪ್ರಸ್ತುತಗೊಳ್ಳಲಿವೆ. ಜನಪ್ರಿಯ ಗಾಯಕರಾದ ಕಿಶೋರ್ ಕುಮಾರ್ ಹಾಗೂ ಹೇಮಂತ್ ಕುಮಾರ್ ಹಾಗೂ ಮೊಹಮದ್ ರಫಿ ಅವರು ಹಾಡಿರುವ ಹಾಡುಗಳು ಇಲ್ಲಿ ಅನುರಣಿಸಲಿವೆ. ಜನಪ್ರಿಯ ಗೀತೆ ಗಾತಾ ರಹೇ ಮೇರಾ ದಿಲ್ ಹಾಡನ್ನು ಕೃಷ್ಣ, ಆಕಾಂಕ್ಷಾ ಬಾದಾಮಿ, ವ್ಯಾಸರಾಜ್ ಐಶ್ವರ್ಯಾ ಮತ್ತು ರಘುಪತಿ ಝಾ ಅವರು ಹಾಡಲಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ದೇಣಿಗೆ ಪಾಸುಗಳ ಬೆಲೆ ರೂ.550, 330 ಮತ್ತು 220. ಚರ್ಚ್ ಸ್ಟ್ರೀಟ್, ಜಯನಗರ ಹಾಗೂ ಮಲ್ಲೇಶ್ವರಂನಲ್ಲಿ ಪಾಸುಗಳು ದೊರೆಯುತ್ತವೆ. ಮಾಹಿತಿಗೆ: 90080 08458. ಆನ್‌ಲೈನ್ ಬುಕಿಂಗ್‌ಗಾಗಿ www.buzzintown.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT