ನವದೆಹಲಿ (ಪಿಟಿಐ): ಅಮೆರಿಕದ ಕೆಲವು ಶ್ರೇಣಿಯ ರಾಜತಾಂತ್ರಿಕ ಅಧಿಕಾರಿಗಳ ರಕ್ಷಣೆಯನ್ನು ಭಾರತ ಸರ್ಕಾರ ಕಡಿತಗೊಳಿಸಿದೆ. ಹಾಗೆಯೇ ಅವರ ಕುಟುಂಬ ಸದಸ್ಯರ ಎಲ್ಲ ರೀತಿಯ ರಾಜತಾಂತ್ರಿಕ ರಕ್ಷಣೆಯನ್ನು ರದ್ದುಪಡಿಸಿದೆ.
ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಪ್ರಕರಣಕ್ಕೆ ಕಠಿಣ ಪ್ರತಿ ಕ್ರಮದ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ, ವೀಸಾ ವಂಚನೆ ಪ್ರಕರಣದಲ್ಲಿ ದೇವಯಾನಿ ಅವರನ್ನು ಬಂಧಿಸಿ, ಅಪಮಾನಕರ ದೇಹ ಶೋಧಕ್ಕೆ ಒಳಪಡಿಸಲಾಗಿತ್ತು. ಭಾರತದಲ್ಲಿರುವ ಅಮೆರಿಕದ ನಾಲ್ಕು ಕಾನ್ಸುಲ್ ಕಚೇರಿಗಳ ಅಧಿಕಾರಿಗಳಿಗೆ ಹೊಸ ಗುರುತು ಚೀಟಿಗಳನ್ನು ನೀಡಲಾಗುವುದು.
‘ಈ ಗುರುತು ಚೀಟಿಗಳ ಪ್ರಕಾರ, ಈ ಅಧಿಕಾರಿಗಳ ರಾಜತಾಂತ್ರಿಕ ರಕ್ಷಣೆ ಕಡಿತಗೊಳ್ಳಲಿದ್ದು, ಗಂಭೀರ ಪ್ರಕರಣಗಳಲ್ಲಿ ಅವರಿಗೆ ರಕ್ಷಣೆ ದೊರೆಯುವುದೇ ಇಲ್ಲ. ’ ಅಮೆರಿಕದಲ್ಲಿರುವ ಭಾರತೀಯ ಕಾನ್ಸುಲ್ ಅಧಿಕಾರಿಗಳಿಗೆ ನಿರ್ಬಂಧಿತ ರಕ್ಷಣೆ ಮಾತ್ರ ಇರುವುದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿದೆ.