ಇಟಾನಗರ (ಪಿಟಿಐ): ನಾಗಾಲ್ಯಾಂಡ್ ಮತ್ತು ಮ್ಯಾನ್ಮಾರ್ ಗಡಿಭಾಗದಲ್ಲಿರುವ ಅರುಣಾಚಲ ಪ್ರದೇಶದ ತಿರಾಪ್ ಹಾಗೂ ಚಾಂಗ್ಲಾಂಗ್ ಜಿಲ್ಲೆಗಳಲ್ಲಿನ ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಶನಿವಾರ ವಿಶೇಷ ಪ್ಯಾಕೇಜ್ ಘೋಷಿಸಿದೆ.
ರಾಜ್ಯಗಳ ಭದ್ರತಾ ಪರಿಸ್ಥಿತಿ ಅವಲೋಕನ ಸಭೆಯಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು `ತಿರಾಪ್ ಹಾಗೂ ಚಾಂಗ್ಲಾಂಗ್ ಜಿಲ್ಲೆಗಳಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೊಸ ಪೊಲೀಸ್ ಠಾಣೆಗಳ ನಿರ್ಮಾಣ ಹಾಗೂ ಪೊಲೀಸ್ ನೇಮಕಾತಿಗಾಗಿ ಈಗಾಗಲೇ ಕೇಂದ್ರ ಗೃಹ ಸಚಿವಾಲಯವು ಪ್ಯಾಕೇಜ್ನಡಿ ಅನುದಾನ ಬಿಡುಗಡೆ ಮಾಡಿದೆ. ಜತೆಗೆ ರಾಷ್ಟ್ರ ವಿರೋಧಿ ಕೃತ್ಯಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು (ಸಿಆರ್ಪಿಎಫ್) ನಿಯೋಜಿಸಲಾಗುವುದು~ ಎಂದು ಹೇಳಿದರು.
`ಈಗಾಗಲೇ ಎರಡು ಜಿಲ್ಲೆಗಳಲ್ಲಿ ಅರುಣಾಚಲ ಪ್ರದೇಶ ಸರ್ಕಾರವು 1526 ಹೊಸ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು, ಜುಲೈ 2ರಿಂದ ಹೊಸ ಸಿಬ್ಬಂದಿಗಳ ತರಬೇತಿ ಆರಂಭವಾಗಲಿದೆ~ಎಂದ ಚಿದಂಬರಂ ಅವರು `ಸಧ್ಯ 400 ಸಿಬ್ಬಂದಿಗಳ ನೇಮಕಾತಿ ನಡೆಯಲಿದ್ದು, ಉಳಿದ ನೇಮಕಾತಿಗಳನ್ನು ರಾಜ್ಯ ಸರ್ಕಾರವು ಹಂತಹಂತವಾಗಿ ನಡೆಸಲಿದೆ~ ಎಂದು ತಿಳಿಸಿದರು.