ನವದೆಹಲಿ (ಪಿಟಿಐ): ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಈ ಸಂಬಂಧ ದೆಹಲಿಯ ಮಾಜಿ ಶಾಸಕ ರಾಮಗೋಪಾಲ ಸಿಂಗ್ ಸಿಸೊಡಿಯಾ ಎಂಬುವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಮರುಗೇಶನ್ ಹಾಗೂ ನ್ಯಾಯಮೂರ್ತಿ ರಾಜೀವ್ ಸಹಾಯ್ ಅವರನ್ನು ಒಳಗೊಂಡ ಪೀಠ ವಜಾ ಮಾಡಿದ್ದು ಸರ್ಕಾರದ ಕ್ರಮವನ್ನು ಎತ್ತಿಹಿಡಿಯಿತು.
ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜೀವ್ ಮೆಹ್ರಾ, ರಾಜ್ಯಸಭೆಗೆ ಸಚಿನ್ ಅವರನ್ನು ಆಯ್ಕೆ ಮಾಡಿರುವ ಕ್ರಮ ಸಂವಿಧಾನದ ಅನ್ವಯವೇ ನಡೆದಿದ್ದು, ಕ್ರೀಡಾ ಕ್ಷೇತ್ರಕ್ಕೆ ಅವರ ಗಣನೀಯ ಕೊಡುಗೆ ಗಮನಿಸಿ ನಾಮಕರಣ ಮಾಡಲಾಗಿದೆ. ಸಂವಿಧಾನದ 80ನೇ ವಿಧಿ ಅನ್ವಯ ವಿಜ್ಞಾನ, ಕಲೆ, ಸಾಹಿತ್ಯ, ಸಮಾಜ ಸೇವೆ, ಶಿಕ್ಷಣ, ಕ್ರೀಡೆ ಮತ್ತಿತರ ಕ್ಷೇತ್ರಗಳ ಸಾಧಕರನ್ನು ರಾಜ್ಯಸಭೆಗೆ ನಾಮಕರಣ ಮಾಡಬಹುದಾಗಿದೆ ಎಂದು ಪ್ರತಿಪಾದಿಸಿದರು. ರಾಜ್ಯಸಭೆಗೆ ಸಚಿನ್ ಅವರನ್ನು ನಾಮಕರಣ ಮಾಡುವ ಸಂದರ್ಭ ಸರ್ಕಾರ ಸಂವಿಧಾನದ 80ನೇ ವಿಧಿ ಉಲ್ಲಂಘಿಸಿದೆ. ಈ ರೀತಿ ನಾಮಕರಣಗೊಳ್ಳುವ ವ್ಯಕ್ತಿಗಳಿಗೆ ಸಾಹಿತ್ಯ, ವಿಜ್ಞಾನ, ಕಲೆ ಇಲ್ಲವೆ ಸಮಾಜ ಸೇವಾ ಕ್ಷೇತ್ರಗಳ ಬಗ್ಗೆ ವಿಶೇಷ ಜ್ಞಾನ ಇಲ್ಲವೆ ಪ್ರಾಯೋಗಿಕ ಅನುಭವ ಇರಬೇಕಾಗುತ್ತದೆ. ಆದರೆ ಈ ಯಾವ ಕ್ಷೇತ್ರಗಳಲ್ಲೂ ಸಚಿನ್ ತೆಂಡೂಲ್ಕರ್ಗೆ ಅನುಭವ ಇಲ್ಲ ಎಂದು ಸಿಸೊಡಿಯಾ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.
ಆದರೆ ಈ ಸಂಬಂಧ ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ, ವಿಜ್ಞಾನ, ಸಾಹಿತ್ಯ, ಕಲೆ ಹಾಗೂ ಸಮಾಜ ಸೇವಾ ಕ್ಷೇತ್ರಗಳ ಜತೆಯಲ್ಲಿ ಕ್ರೀಡೆ, ಶಿಕ್ಷಣ, ಕಾನೂನು, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮದಂತಹ ರಂಗಗಳಿಗೂ ಇದು ಅನ್ವಯವಾಗುತ್ತದೆ ಎಂದು ಪ್ರತಿಪಾದಿಸಿತ್ತು.