ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಅರವಿಂದ್ ಕೇಜ್ರಿವಾಲ್ ಸಂಪುಟ ಸೇರುವ ಸಂಭವನೀಯ ಸಚಿವರ ಪಟ್ಟಿ ಸಿದ್ಧವಾಗಿದ್ದು, ಪಟ್ಪಾಡ್ಗಂಜ್ ಕ್ಷೇತ್ರದಿಂದ ಆಯ್ಕೆಯಾಗಿರುವ ಮಾಜಿ ಪತ್ರಕರ್ತ ಮನೀಷ್ ಸಿಸೋಡಿಯಾ ಸೇರಿ ಅನೇಕರಿಗೆ ಅದೃಷ್ಟ ಒಲಿಯುವ ಸಾಧ್ಯತೆಯಿದೆ.
ಜನ ಲೋಕಪಾಲ್ ಮಸೂದೆ ಜಾರಿಗಾಗಿ ನಡೆದ ಹೋರಾಟದ ಸಮಯದಲ್ಲಿ ಬೆಳಕಿಗೆ ಬಂದ ಸಿಸೋಡಿಯಾ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಸೌರಭ್ ಭಾರದ್ವಾಜ್, ವಿನೋದ್ ಕುಮಾರ್ ಬಿನ್ನಿ, ಸೋಮನಾಥ್ ಭಾರ್ತಿ, ರಾಖಿ ಬಿರ್ಲಾ, ಬಂದನ ಕುಮಾರಿ ಹಾಗೂ ಜರ್ನೈಲ್ಸಿಂಗ್ ಅವರು ಸಂಪುಟ ಸೇರುವ ಸಂಭವವಿದೆ.
ಪ್ರತಿಕ್ರಿಯೆಗೆ ಹಜಾರೆ ನಕಾರ: ದೆಹಲಿಯಲ್ಲಿ ಹೊಸ ಸರ್ಕಾರ ರಚಿಸುವ ಆಮ್ ಆದ್ಮಿ ಪಕ್ಷದ ನಿರ್ಧಾರದ ಬಗ್ಗೆ ಅಣ್ಣಾ ಹಜಾರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಲೋಕಾಯುಕ್ತ ವಿಚಾರದ ಬಗ್ಗೆ ಅರವಿಂದ್ ಕೇಜ್ರಿವಾಲ್ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದಾಗಿ ಹಜಾರೆ ತಿಳಿಸಿದ್ದಾರೆ.
‘ಬಹಳ ದಿನ ಉಳಿಯದು’: ದೆಹಲಿಯಲ್ಲಿ ರಚನೆಯಾಗಲಿರುವ ಆಮ್ ಆದ್ಮಿ ಪಕ್ಷದ ಸರ್ಕಾರ ಎಷ್ಟು ಕಾಲ ಉಳಿಯಬಹುದು ಎಂಬ ಬಗ್ಗೆ ಆ ಪಕ್ಷದ ನಾಯಕರಿಗೇ ಖಚಿತತೆಯಿಲ್ಲ.
‘ಕಾಂಗ್ರೆಸ್ ಪಕ್ಷದ ಹಿನ್ನೆಲೆ ಗಮನಿಸಿದರೆ ಈ ಸರ್ಕಾರ ಬಹಳ ಕಾಲ ಉಳಿಯುವ ನಿರೀಕ್ಷೆ ಇಲ್ಲ. ಒಂದು ತಿಂಗಳೋ, ಎರಡು ತಿಂಗಳೋ ಅಥವಾ ಆರು ತಿಂಗಳೋ ಎಂಬುದನ್ನು ಕಾದು ನೋಡಬೇಕಿದೆ’ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
‘ಕಾಂಗ್ರೆಸ್ನ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳುವುದಿಲ್ಲ. ನಾವು ನಮ್ಮದೇ ಕಾರ್ಯಸೂಚಿ ಅನುಷ್ಠಾನಗೊಳಿಸುತ್ತೇವೆ’ ಎಂದು ತಿಳಿಸಿದ್ದಾರೆ.
‘ದೆಹಲಿ ಜನರಿಗೆ ಮೋಸ’: ಆಮ್ ಆದ್ಮಿ ಪಕ್ಷದ ಸರ್ಕಾರ ರಚಿಸುವ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ.
‘ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟದ ಭರವಸೆ ನೀಡಿದೆ. ಆದರೆ ಈಗ ಭ್ರಷ್ಟ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ತನ್ನ ತತ್ವಗಳೊಂದಿಗೆ ರಾಜಿ ಮಾಡಿಕೊಂಡಿದೆ. ಚುನಾವಣೆಯಲ್ಲಿ ದೆಹಲಿ ಜನರು ಕಾಂಗ್ರೆಸನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ನೊಂದಿಗೆ ಸೇರಿ ರಚಿಸುವ ಸರ್ಕಾರ ದೆಹಲಿ ಜನರಿಗೆ ಮಾಡುವ ಮೋಸ’ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಹೇಳಿದ್ದಾರೆ.
‘ಬೆಂಬಲ ಬೇಷರತ್ ಅಲ್ಲ’: ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲ ಬೇಷರತ್ ಅಲ್ಲ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.
‘ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೇವೆ. ಇದು ಬೇಷರತ್ ಅಲ್ಲ. ಸರ್ಕಾರ ರಚಿಸುವ ಅವರ ನಿರ್ಧಾರವನ್ನು ನಾನು ಅಭಿನಂದಿಸುತ್ತೇನೆ. ಎಎಪಿ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎಂದು ನಂಬಿದ್ದೇನೆ’ ಎಂದಿದ್ದಾರೆ.
‘ದೇವರೇ ರಕ್ಷಕ’
ಅರವಿಂದ್ ಕೇಜ್ರಿವಾಲ್ ತಮಗೆ ಒದಗಿಸಲಾದ ಭದ್ರತೆನಿರಾಕರಿಸಿದ್ದಾರೆ. ‘ದೇವರೇ ನನಗೆ ಅತ್ಯಂತ ದೊಡ್ಡ ಭದ್ರತೆ’ ಎಂದು ಅವರು ಹೇಳಿದ್ದಾರೆ.
ತಮಗೆ ಝೆಡ್ ಶ್ರೇಣಿ ಭದ್ರತೆ ನೀಡಲಾಗುವುದು ಎಂದು ದೆಹಲಿ ಹೆಚ್ಚುವರಿ ಆಯುಕ್ತ ವಿ. ರಂಗನಾಥನ್, ಕೇಜ್ರಿವಾಲ್ ಅವರಿಗೆ ಪತ್ರ ಬರೆದು ತಿಳಿಸಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ತನಗೆ ಯಾವುದೇ ಭದ್ರತೆ, ಬೆಂಗಾವಲು ಅಥವಾ ವೈಯಕ್ತಿಕ ಭದ್ರತಾ ಅಧಿಕಾರಿ ಅಗತ್ಯವಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.