ಬೆಂಗಳೂರು: `ಕುಂಬಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆ~ ಎಂದು ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
`ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಪರಿಗಣಿಸಿ ಅಧ್ಯಕ್ಷರನ್ನು ಈ ಕೂಡಲೇ ಅಮಾನತುಗೊಳಿಸಬೇಕು~ ಎಂದು ಅವರು ಒತ್ತಾಯಿಸಿದರು.
`ಗ್ರಾ.ಪಂ.ನಲ್ಲಿ 2ವರ್ಷಗಳಿಂದ ಜಮಾ ಬಂದಿ ನಡೆಸಿರುವುದಿಲ್ಲ, ಯಾವುದೇ ಸ್ಥಾಯಿ ಸಮಿತಿಗಳ ರಚನೆ ಹಾಗೂ ಸಭೆಗಳು ನಡೆದಿಲ್ಲ. ಮಾಸಿಕ ಸಭೆಗಳು ಸಹ ಸಕಾಲಕ್ಕೆ ನಡೆಯುತ್ತಿಲ್ಲ. ಕಳೆದ 18 ತಿಂಗಳಲ್ಲಿ ಐದರಿಂದ ಆರು ಮಾಸಿಕ ಸಭೆಗಳು ಮಾತ್ರ ನಡೆದಿವೆ~ ಎಂದರು.
`ಕುಡಿಯುವ ನೀರಿನ ಸಾಮಗ್ರಿಗಳು ಮತ್ತು ವಿದ್ಯುತ್ ದೀಪಗಳು ಖರೀದಿ ಹಾಗೂ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ. ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಈ ಸಂಬಂಧ ಪ್ರಶ್ನಿಸಿದ್ದಕ್ಕೆ ಅಧ್ಯಕ್ಷ ಗೋಪಾಲಕೃಷ್ಣ ಅವರು ನನ್ನ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಬಿಡದಿ ಠಾಣೆಯ ಎಸ್ಐ ವಿಜಯ್ಕುಮಾರ್ ಅವರು ನನ್ನನ್ನು ಎರಡು ಬಾರಿ ಬಂಧಿಸಿದ್ದರು~ ಎಂದರು.
`ನನಗೆ ಪ್ರಾಣ ಬೆದರಿಕೆ ಇದ್ದು, ಎಸ್ ಐ ವಿಜಯ್ಕುಮಾರ್ ಮತ್ತು ಗೋಪಾಲೃಷ್ಣ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು~ ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ವೆಂಕಟಾಚಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.