ಬೆಂಗಳೂರು: ಹೋಟೆಲ್ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸುಧಾಮ ನಗರ ವಾರ್ಡ್ ಸದಸ್ಯೆ, ಕಾಂಗ್ರಸ್ನ ಅವ್ವಾಯಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ಷರತ್ತಿನ ಜಾಮೀನು ನೀಡಿದೆ.
ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ನೀಡಬೇಕು. ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಬೆದರಿಸಲು ಯತ್ನಿಸಬಾರದು. ಅನುಮತಿ ಇಲ್ಲದೆ ರಾಜ್ಯದಿಂದ ಹೊರಗೆ ತೆರಳಬಾರದು ಎಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಆದೇಶಿಸಿದರು.
`ಆರೋಪಿಗಳು ಪ್ರತಿನಿತ್ಯ ಯಾರನ್ನು ಸಂಪರ್ಕಿಸುತ್ತಾರೆ ಎಂಬುದನ್ನು ಬರೆದಿಡಬೇಕು. ಇದನ್ನು ತನಿಖಾಧಿಕಾರಿಗೆ ನೀಡಬೇಕು' ಎಂದೂ ನ್ಯಾಯಪೀಠ ನಿರ್ದೇಶನ ನೀಡಿತು. ಅವ್ವಾಯಿ ಅವರು ತನಿಖಾಧಿಕಾರಿ ಕಚೇರಿಗೆ ಪ್ರತಿ ಸೋಮವಾರ ಹಾಜರಾಗಿ, ಸಹಿ ಮಾಡಬೇಕು. ದೂರುದಾರರಿಗೆ ಬೆದರಿಕೆ ಒಡ್ಡುವ ಅಥವಾ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದೂ ನ್ಯಾಯಾಲಯ ಎಚ್ಚರಿಕೆ ನೀಡಿತು.