ಮಡಿಕೇರಿ: ಇಲ್ಲಿನ ಅಶ್ವಿನಿ ಆಸ್ಪತ್ರೆ ಆಯೋಜಿಸಿದ್ದ 27ನೇ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ದಾಖಲೆ ಪ್ರಮಾಣದಲ್ಲಿ 396 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಅಶ್ವಿನಿ ಟ್ರಸ್ಟ್ನ ಕಾರ್ಯದರ್ಶಿ ಗೋಖಲೆ ತಿಳಿಸಿದರು.
ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೊದಲು ಕೊಡಗು ಜಿಲ್ಲೆ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ವಿವಿಧೆಡೆ ಸುಮಾರು 3,800 ಜನರಿಗೆ ಪ್ರಾಥಮಿಕ ಹಂತದ ಪರೀಕ್ಷೆ ನಡೆಸಲಾಗಿತ್ತು.
ಸುಮಾರು ಕಣ್ಣಿನ ಪೊರೆ ಸೇರಿದಂತೆ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು 396 ಜನರಿಗೆ ಮಾಡಲಾಯಿತು. ಕೊಡಗು ಜಿಲ್ಲೆ ಹಾಗೂ ಪಕ್ಕದ ಪಿರಿಯಾಪಟ್ಟಣ ಕಡೆಯ ವಿವಿಧ ಜನರು ಇದರಲ್ಲಿ ಸೇರಿದ್ದಾರೆ.
ಶಿಬಿರ ನಡೆಸಲು ಸುಮಾರು ರೂ 7.84 ಲಕ್ಷ ಹಣವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ. ಶಿಬಿರವನ್ನು ಆಯೋಜಿಸಲು ಕೊಡಗು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಪಾಲಿಬೆಟ್ಟದ ಕೂರ್ಗ್ ಫೌಂಡೇಶನ್, ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್, ಲಯನ್ಸ್ ಕ್ಲಬ್, ಬೆಂಗಳೂರಿನ ಜೈಂಟ್ಸ್ ಗ್ರೂಪ್ ಆಫ್ ಗಾರ್ಡನ್ ಸಿಟಿ ಹಾಗೂ ಕೊಡಗು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕರಿಸಿವೆ ಎಂದು ಅವರು ಹೇಳಿದರು.
ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಶ್ವಿನಿ ಟ್ರಸ್ಟ್ ಟ್ರಸ್ಟಿ ಎ.ಎ. ಚೆಂಗಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರು ಆಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಂಗಪ್ಪ, ವೈದ್ಯರಾದ ಡಾ.ಎನ್.ಎ. ಸುಧಾಕರ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಡಾ.ಪ್ರಶಾಂತ್, ರೋಟರಿ ಅಧ್ಯಕ್ಷ ಡಿ.ಎಂ. ಕಿರಣ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಸಿ. ನಂಜಪ್ಪ, ನಾಪೋಕ್ಲು ಲಯನ್ಸ್ ಅಧ್ಯಕ್ಷ ಕೆ.ಪಿ. ಅಯ್ಯಣ್ಣ ಇದ್ದರು.