ಬೆಂಗಳೂರು: ದೇಶದ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಸಿಕ್ಕಾಗ ಮಾತ್ರ ಮಹಾತ್ಮ ಗಾಂಧೀಜಿ ಅವರ ಆಶಯಗಳು ಸಾಕಾರವಾಗಲು ಸಾಧ್ಯ ಎಂದು ಭಾರತ ಸೇವಾದಳದ ಸದಸ್ಯ ಡಾ.ವೂಡೇ ಪಿ. ಕೃಷ್ಣ ಹೇಳಿದರು.
ಭಾರತ ಸೇವಾದಳವು ಬುಧವಾರ ನಗರದ ಹೋಟೆಲ್ ಲಲಿತ್ ಅಶೋಕ್ ಆವರಣದಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ವರೂ ಸಮಾನತೆಯ ಜೀವನ ನಡೆಸಬೇಕು ಎಂದು ಗಾಂಧೀಜಿ ಅವರ ಆಶಯವಾಗಿತ್ತು. ಅವರು ಬೋಧಿಸಿದ ಸತ್ಯ-ಅಹಿಂಸೆಯ ಮಾರ್ಗ ಸರ್ವ ಕಾಲಕ್ಕೂ ಪ್ರಸ್ತುತ ಎಂದು ಅವರು ನುಡಿದರು.
ಗಾಂಧೀಜಿ ಅವರನ್ನು ಬಿಟ್ಟು ಭಾರತವಿಲ್ಲ. ತಾವು ಹೇಳಿದ ಸಿದ್ಧಾಂತಗಳು ಹೊಸದೇನೂ ಅಲ್ಲ, ಅವೆಲ್ಲ ಪುರಾತನವಾದ ನಮ್ಮ ನೆಲದ ತತ್ವ ಸಿದ್ಧಾಂತಗಳೇ ಎಂದು ಗಾಂಧೀಜಿ ಹೇಳುತ್ತಿದ್ದರು ಎಂದು ಅವರು ಹೇಳಿದರು.
1927ರಲ್ಲಿ ಗಾಂಧೀಜಿ ನಗರಕ್ಕೆ ಬಂದಿದ್ದಾಗ ಅಶೋಕ್ ಹೋಟೆಲ್ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹೀಗಾಗಿ ಈ ಸ್ಥಳದಲ್ಲಿ ಪ್ರತಿ ವರ್ಷ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದರು.
ಹೋಟೆಲ್ ಲಲಿತ್ ಅಶೋಕ್ನ ಪ್ರಧಾನ ವ್ಯವಸ್ಥಾಪಕ ಅಮಿತ್ ಸ್ಯಾಮ್ಸನ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಜಯಂತಿ ಮತ್ತು ಹುತಾತ್ಮರ ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಬಂದಿದ್ದೇನೆ. ಗಾಂಧೀಜಿ ಅವರು ಪ್ರಾರ್ಥನೆ ಮಾಡಿದ ಸ್ಥಳವನ್ನು ಗೌರವದಿಂದ ಸಂರಕ್ಷಿಸಿಕೊಂಡು ಬರಲಾಗುತ್ತದೆ ಎಂದು ಹೇಳಿದರು.