ರಾಣೆಬೆನ್ನೂರು: ತುಂಗಭದ್ರಾ ನದಿಯಿಂದ ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಕೆರೆಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ತಹಶೀಲ್ದಾರ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಅಹೋರಾತ್ರಿ ಭಜನೆ ಹಾಗೂ ಸ್ಥಳದಲ್ಲಿಯೆ ಅಡುಗೆ ತಯಾರಿಸಿ ಊಟ ಮಾಡುವುದರ ಮೂಲಕ ಎರಡನೇಯ ದಿನಕ್ಕೆ ಪ್ರತಿಭಟನೆ ಮುಂದುವರಿದಿದೆ.
ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕಡೂರ, ಕೆರಗೆ ನೀರು ತುಂಬಿಸುವುದರಿಂದ ಜಾನುವಾರಗಳಿಗೆ ನೀರು ಕುಡಿಯಲು ಅನೂಕೂಲವಾಗುವುದರ ಜೊತೆಗೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿಯೂ ಅಂತರ್ ಜಲಮಟ್ಟ ಹೆಚ್ಚಾಗುತ್ತದೆ. ಅಂತರ್ಜಲದ ಕೊರತೆಯಿಂದಾಗಿ ಬತ್ತಿ ಹೋಗುತ್ತಿರುವ ಕೊಳವೆ ಬಾವಿಗಳಲ್ಲಿ ಜಲ ಮರು ಭರಣವಾಗಿ ನೀರಾವರಿಗೆ ಉಪಯುಕ್ತವಾಗುತ್ತದೆ ಎಂದರು.
ನೀರು ತುಂಬಿಸುವಂತೆ ಆಗ್ರಹಿಸಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ, ಕಾರಣ ರಾಜ್ಯದಲ್ಲಿ ಸರ್ಕಾರ ಸತ್ತಿರಬೇಕೆಂದು ಭಾವಿಸಿ ಶವ ಸಂಸ್ಕಾರವಾಗುವವರೆಗೆ ಭಜನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಡೂರ ಲೇವಡಿ ಮಾಡಿದರು.
ಮೂರು ಭಾಗವಾಗಿರುವ ಬಿಜೆಪಿ ಸರ್ಕಾರ ಸಂಪೂರ್ಣ ಬಹುತ ಕಳೆದು ಕೊಂಡಿದೆ. ರಾಜ್ಯಪಾಲರು ತಕ್ಷಣ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಸಿದ್ದಣ್ಣ ಕುಪ್ಪೇಲೂರ, ಹನುಮಂತಪ್ಪ ಚೌಡಣ್ಣನವರ, ದಿಳ್ಳೆಪ್ಪ ಕಂಬಳಿ, ಈರಪ್ಪ ಬುಡಪನಹಳ್ಳಿ, ಶಂಕ್ರಪ್ಪ ನೆಸ್ವಿ, ರಂಗಪ್ಪ ಪೂಜಾರ, ನಾಗಪ್ಪ ಎಲಿಗಾರ, ಮಾರುತಪ್ಪ ಮೀನಕಟ್ಟಿ, ಗಣೇಶ ಬಿಲ್ಲಾಳ, ಸುಭಾಷ್ ಬಾರ್ಕಿ, ದಿಳ್ಳೆಪ್ಪ ಗೋಣೆಪ್ಪನವರ, ಹುಚ್ಚಪ್ಪ ಅಂತರವಳ್ಳಿ, ಗುತ್ತೆಪ್ಪ ಹೀಲದಹಳ್ಳಿ, ಹನುಮಂತಪ್ಪ ಮೀನಕಟ್ಟಿ, ನಾಗಪ್ಪ ಶೀಳೇರ, ಬೀರೇಶ ಕೂನಬೇವು, ಸುರೇಶ ದೂಳೆಹೊಳೆ, ಚನ್ನಬಸನಗೌಡ ದೊಡ್ಡಗೌಡ್ರ, ಶರೀಪ್ಸಾಬ್ ಪಿಂಜಾರ, ಸಿದ್ದಣ್ಣ ಕುಪ್ಪೇಲೂರ, ಮಳ್ಳಪ್ಪ ಮೇಲಮಾಳಗಿ ಸೇರಿದಂತೆ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.