ನವದೆಹಲಿ: ‘ಆ ರಾಕ್ಷಸರನ್ನು ಗಲ್ಲಿಗೆ ಹಾಕಬೇಕು. ಮುಂದೆ ಯಾವ ಕಾಮುಕರೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವುದಿರಲಿ, ತೊಂದರೆಯನ್ನೂ ನೀಡಬಾರದು. ಈ ಕ್ರಿಮಿನಲ್ಗಳಿಗೆ ಶಿಕ್ಷೆ ನೀಡುವ ಮೂಲಕ ಅಂತಹ ಎಚ್ಚರಿಕೆಯನ್ನು ನೀಡಬೇಕು. ನಿಜವಾಗಿಯೂ ಅವರನ್ನು ಸುಡಬೇಕು’
––ಇದು ಸಾಮೂಹಿಕ ಅತ್ಯಾಚಾರಕ್ಕೀಡಾದ 23 ವರ್ಷದ ಯುವತಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಉಪವಿಭಾಗಾಧಿಕಾರಿಗೆ ಡಿ.23ರಂದು ನೀಡಿದ್ದ ಹೇಳಿಕೆ.
ಪೆನ್ ಹಿಡಿಯವಷ್ಟು ಶಕ್ತಿ ಇಲ್ಲದ ಆಕೆ ತುಂಡು ಕಾಗದದ ಮೇಲೆ ಆರೋಪಿಗಳಲ್ಲಿ ಕೆಲವರ ಹೆಸರನ್ನು ಗೀಚಿದ್ದಳು.
‘ಕೆಲವರು ನಮ್ಮತ್ತ ಬಂದರು. ಕಬ್ಬಿಣದ ಸಲಾಕೆಗಳಿಂದ ಹೊಡೆದರು’ ಎಂದು ಹಿಂದಿಯಲ್ಲಿ ಬರೆದಿದ್ದಳು.
‘ಆ ಬಸ್ಗೆ ಹತ್ತಿದ್ದು ಸರಿಯಿಲ್ಲ ಎಂದು ಎನಿಸುತ್ತಿತ್ತು. ಅಷ್ಟರಲ್ಲಿ ನಿರ್ವಾಹಕ ₨20ರ ಟಿಕೆಟ್ ಕೊಟ್ಟುಬಿಟ್ಟಿದ್ದ, ಬಸ್ ಹೊರಟಿತ್ತು. ಇನ್ನೇನು ಮಾಡುವುದು ಎಂದು ನಾವು ಎರಡನೇ ಸಾಲಿನಲ್ಲಿದ್ದ ಸೀಟಿನಲ್ಲಿ ಕೂತೆವು. ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಅವರು ಪ್ರಯಾಣಿಕರಂತೆ ಸೋಗು ಹಾಕಿ ಕುಳಿತಿದ್ದರು’
‘ಒಬ್ಬ ನನ್ನ ಸ್ನೇಹಿತನನ್ನು ಬೈದು, ಹೊಡೆದ. ಅವನು ಪ್ರತಿರೋಧ ವ್ಯಕ್ತಪಡಿಸುವಷ್ಟರಲ್ಲಿ ಇತರ ದುರುಳರು ಸೇರಿಕೊಂಡು ಅವನನ್ನು ಹೊಡೆಯ ತೊಡಗಿದರು. ನಾನು ಅವನನ್ನು ರಕ್ಷಿಸಲು ಮುಂದಾದೆ. ಆದರೆ, ಆ ರಾಕ್ಷಸರು ಸೇಡು ತೀರಿಸಿಕೊಳ್ಳುವಂತೆ ಅವನ ಮೇಲೆ ಮುಗಿಬಿದ್ದರು’.
‘ನನ್ನನ್ನು ಬಸ್ನ ಹಿಂಭಾಗಕ್ಕೆ ಎಳೆದೊಯ್ದರು. ಬಟ್ಟೆ ಹರಿದು, ಮೈಮೇಲೆ ಬಿದ್ದರು. ಕಬ್ಬಿಣದ ಸಲಾಕೆಯಿಂದ ಮನಬಂದಂತೆ ಎಲ್ಲೆಡೆ ಹೊಡೆದರು. ದೇಹದೊಳಗೆ ಸಲಾಕೆ ತೂರಿಸಿದರು, ಒಂದು ತಾಸಿಗೂ ಹೆಚ್ಚು ಕಾಲ ಅತ್ಯಾಚಾರ ಎಸಗಿದರು. ನೀಚರ ದೌರ್ಜನ್ಯದಿಂದ ಜರ್ಜರಿತಳಾದೆ. ಅರೆ ಪ್ರಜ್ಞೆಗೆ ಜಾರಿದೆ’.
‘ನಾವಿಬ್ಬರು ಸತ್ತಿದ್ದೇವೆ ಎಂದು ಭಾವಿಸಿದ ಆ ಕಾಮುಕರು ನಮ್ಮನ್ನು ಬಸ್ನಿಂದ ಹೊರಗೆ ಎಸೆದರು. ರಸ್ತೆ ಬದಿ ಬಿದ್ದಿದ್ದ ನಮ್ಮ ಮೈಮೇಲೆ ಬಟ್ಟೆ ಇರಲಿಲ್ಲ. ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ಯುವತಿ ಹೇಳಿಕೆ ನೀಡಿದ್ದಳು.