ಹೊಸಕೋಟೆ: ಚಿಂತಾಮಣಿ ರಸ್ತೆಯ ದೊಡ್ಡಹುಲ್ಲೂರು ಬಳಿ ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಬಸ್ ಒಂದು ಬೈಕ್ಗೆ ಡಿಕ್ಕಿ ಹೊಡೆದುದರಿಂದ ಅದರ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೆಂಗಳೂರು ಲಕ್ಕಸಂದ್ರ ವಾಸಿ ನಯಾಜ್ಪಾಷ (24) ಮತ್ತು ಆಡುಗೋಡಿ ವಾಸಿ ಶೇಖ್ ಇನಾಯತ್ (25) ಮೃತಪಟ್ಟವರು. ಅವರಿಬ್ಬರೂ ಸ್ನೇಹಿತರಾಗಿದ್ದು ಬೈಕ್ ಮೆಕಾನಿಕ್ ಕೆಲಸ ಮಾಡುತ್ತಿದ್ದರು. ಶೇಕ್ ಇನಾಯತ್ರ ಮದುವೆ ಮುಂದಿನ ವಾರ ಹಾಗು ನಯಾಜ್ಪಾಷ ಅವರ ಮದುವೆ ಮುಂದಿನ ತಿಂಗಳಿದ್ದು ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಚಿಂತಾಮಣಿಯಲ್ಲಿ ಹಂಚಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ಆಂಧ್ರಪ್ರದೇಶದ ಕನಗಿರಿಗೆ ಹೋಗುತ್ತಿತ್ತು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು: ಚಿಂತಾಮಣಿ ರಸ್ತೆಯ ಶಿವನಾಪುರ ಕ್ರಾಸ್ ಬಳಿ ಬುಧವಾರ ರಾತ್ರಿ ರಸ್ತೆಬದಿ ನಡೆದು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಯಾವುದೊ ವಾಹನ ಡಿಕ್ಕಿಹೊಡೆದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮಾರು 40 ವಯಸ್ಸಿನ ವ್ಯಕ್ತಿ ಸಿಮೆಂಟ್ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ಶವವನ್ನು ಎಂವಿಜೆ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಪ್ರಕರಣ ದಾಖಲಿಸಿದ್ದು ವಾರಸುದಾರರು ನಂದಗುಡಿ ಪೊಲೀಸರನ್ನು ಸಂಪರ್ಕಿಸಬಹುದು.