ಹನುಮಸಾಗರ: ಆಕಸ್ಮಿಕ ಬೆಂಕಿಗೆ ಗುಡಿಸಲೊಂದು ಸುಟ್ಟು ನಾಲ್ಕು ಜಾನುವಾರುಗಳು ಬೆಂಕಿಗಾಹುತಿಯಾದ ಘಟನೆ ಸಮೀಪದ ಬೆನಕನಾಳ ಗ್ರಾಮದಲ್ಲಿ ಬುಧವಾರ ಬೆಳಗಿನಜಾವ ನಡೆದಿದೆ.
ಗುಡಿಸಲು ಮತ್ತು ಜಾನುವಾರುಗಳು ಬೆನಕನಾಳ ಗ್ರಾಮದ ಬಸಪ್ಪ ಈರಪ್ಪ ಸೂಡಿ ಎನ್ನುವವರಿಗೆ ಸೇರ್ದ್ದಿದಾಗಿದ್ದು ಹೊಲದಲ್ಲಿರುವ ಈ ಗುಡಿಸಲಿನಲ್ಲಿ ಕಟ್ಟಿದ್ದ ಒಂದು ಆಕಳು, ಒಂದು ಎತ್ತು ಹಾಗೂ ಎರಡು ಕರುಗಳು ಬೆಂಕಿಗೆ ಆಹುತಿಯಾಗಿವೆ.
ಜಾನುವಾರುಗಳ ಜೊತೆಗೆ ಆಹಾರ ಧಾನ್ಯಗಳು, ಕೃಷಿ ಪರಿಕರಗಳೂ ಬೆಂಕಿಗೆ ಆಹುತಿಯಾಗಿದ್ದು, ಒಟ್ಟು ರೂ.1ಲಕ್ಷ 22 ಸಾವಿರ ನಷ್ಟವಾಗಿರಬಹುದೆಂದು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಬಳಿಕ ತಾಲ್ಲೂಕು ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅನಾಹುತ ತಪ್ಪಿಸಲಾಗಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಘಟನಾ ಸ್ಥಳಕ್ಕೆ ಹನುಮಸಾಗರ ಪಿಎಸ್ಐ ನೇತ್ರಾವತಿ ಪಾಟೀಲ, ಸಿಬ್ಬಂದಿ ದುರಗಪ್ಪ, ನೀಲಕಂಠಪ್ಪ, ಹಾಗೂ ಪೊಲೀಸ್ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿ ಅನಿತಾ ಭೇಟಿ ನೀಡಿ ಪರಿಶೀಲಿಸಿದರು.
ಕಟ್ಟಿ ಕಾಡುವ ಬಡತನದಲ್ಲಿ ಇಂತಹ ದುರ್ಗತಿ ನಮಗ ಬರಬಾರದಾಗಿತ್ರಿ, ಕುಟುಂಬದ ಉಪಜೀವನ ನಡೆಸುತ್ತಿದ್ದ ನಾಲ್ಕು ಜೀವಗಳು ನಮ್ಮ ಕಣ್ಮುಂದ ಬೆಂಕಿಗೆ ಆಹುತಿಯಾಗಿದ್ದು ತಡೆದುಕೊಳ್ಳೋಕೆ ಆಗೊಲ್ತು ಎಂದು ಮಾಲೀಕ ಬಸಪ್ಪ ನೋವು ತೋಡಿಕೊಂಡರು.