ಚಿತ್ರದುರ್ಗ: ಸುಂದರ ಸಂಜೆಯ ಸಾಂಸ್ಕೃತಿಕ ಸುಗ್ಗಿಯಲ್ಲಿ ಸಂಗೀತದ ಸಂಭ್ರಮ. ಅಲ್ಲಿ ಸಂಗೀತ ಸುಧೆ ಹರಿದು ಬಂದಿತ್ತು. ಸಂಗೀತ ರಸ ತುಂಬಿ ಹರಿಯಿತು.
ಭಾನುವಾರ ಸಂಜೆ ನಗರದ ತರಾಸು ರಂಗಮಂದಿರ ಕಿಕ್ಕಿರಿದು ತುಂಬಿತ್ತು. ಚಿತ್ರದುರ್ಗ ಆಕಾಶವಾಣಿ ಆಯೋಜಿಸಿರುವ `ಆಕಾಶವಾಣಿ ಹಬ್ಬ~ದ ಅಂಗವಾಗಿ ನಡೆದ ಸುಗಮ ಸಂಗೀತ ಕಲಾರಸಿಕರನ್ನು ಕೈಬೀಸಿ ಕರೆದಿತ್ತು.
ಕಲಾವಿದರಾದ ಬೆಂಗಳೂರಿನ ಎಸ್. ಸುನೀತಾ, ಬೆಂಗಳೂರಿನ ಲಕ್ಷ್ಮೀ ನಟರಾಜ್, ಬೆಂಗಳೂರಿನ ಪಿ.ಎ. ಮಂಗಳಾ ಹಾಗೂ ಸಹೋದರ, ಸಹೋದರಿಯರಾದ ಗುಲ್ಬರ್ಗಾದ ಕುಮಾರ್ ಕಣವಿ ಮತ್ತು ಮಾಲಾಶ್ರಿ ಕಣವಿ ಅವರು ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣಬಡಿಸಿದರು.
ಆರಂಭದಲ್ಲಿ ಪಿ.ಎ. ಮಂಗಳಾ ಅವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜೀವಜಾತ್ರೆಯಲ್ಲಿ ಪ್ರಾಣ ಪಾತ್ರೆಯಲ್ಲಿ ತುಂಬಿ ಬಾ, ರಸತುಂಬಿ ಬಾ, ಮೈದುಂಬಿ ಬಾ... ಹಾಡುವ ಮೂಲಕ ಮನಸೆಳೆದರು. ಎಸ್. ಸುನೀತಾ ಅವರು `ಅಮ್ಮಾ ನಿನ್ನ ಮರೆಯದಂತೆ ನನ್ನೊಮ್ಮೆ ಹರಸು...~, ಕುಮಾರ್ ಕಣವಿ ಅವರು `ನಾನು ನಿನ್ನ ಪ್ರೀತಿಸುವೆ...~ ಹಾಗೂ ಲಕ್ಷ್ಮೀ ನಟರಾಜ್ ಅವರು ಲಕ್ಷ್ಮೀನಾರಾಯಣ ಭಟ್ ಅವರ ನೀ ಸಿಗದೇಬಾಳೊಂದು ಬಾಳೆ ಕೃಷ್ಣಾ....~ ಮತ್ತು ಮಾಲಾಶ್ರೀ ಕಣವಿ ಅವರು ಬಸವೇಶ್ವರರ ವಚನ `ನೀವು ಬಂದ ಕಾರ್ಯಕ್ಕೆ ನಾವು ಬಂದೇವಯ್ಯ...~ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಒಟ್ಟಾರೆ ರಂಗಮಂದಿರದಲ್ಲಿನ ಪ್ರೇಕ್ಷಕರು ಸಂಗೀತದ ನಾದಲೋಕದಲ್ಲಿ ತೇಲಿದರು.
ಕೃಷ್ಣ ಉಡುಪ ಅವರು ಕೀಬೋರ್ಡ್, ಜಿ.ಎನ್. ರಮೇಶ್ ಕೊಳಲು, ಅಭಿಷೇಕ್ ರಿದಂ, ಪ್ರದ್ಯುಮ್ನ ಅವರು ತಬಲಾ ಬಾರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಆಕಾಶವಾಣಿ ಹಬ್ಬ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವ ಮೂಲಕ ಈ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.
ಚಿತ್ರದುರ್ಗ ಆಕಾಶವಾಣಿ 21 ವರ್ಷ ಪೂರೈಸಿದ್ದು, ಸುಮಾರು 30 ಲಕ್ಷ ಜನ ಕೇಳುತ್ತಾರೆ. ಮಾಹಿತಿ, ಮನರಂಜನೆ, ಶಿಕ್ಷಣ ನೀಡುವ ಉದ್ದೇಶ ಹೊಂದಿರುವ ಆಕಾಶವಾಣಿ ಅಭಿವೃದ್ಧಿಗೆ ಪೂರಕವಾದ ಜನಕಲ್ಯಾಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಎಂದು ನುಡಿದರು.
ಕಾರ್ಯಕ್ರಮ ಮುಖ್ಯಸ್ಥ ಮಿಲನ್ಸಾರ್ ಅಹಮ್ಮದ್, ನಿಲಯದ ಎಂಜಿನಿಯರ್ ಎಸ್.ಬಿ. ಮೆಹತ್ರೆ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಾಹಕಿ ಉಷಾಲತಾ ಕಾರ್ಯಕ್ರಮ ನಿರೂಪಿಸಿದರು. ವಿ. ಮಧುಸೂಧನ್ ಕಲಾವಿದರ ಪರಿಚಯ ಮಾಡಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.