ಚಿತ್ರದುರ್ಗ: ಕನ್ನಡ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ದ.ರಾ. ಬೇಂದ್ರೆ ಅವರ ಜೀವನ, ಕಾವ್ಯ ಮತ್ತು ದರ್ಶನದ ಕುರಿತ ನೃತ್ಯ ರೂಪಕ `ಔದುಂಬರಗಾಥಾ~ ಮನತಣಿಸಿತು.
ಖ್ಯಾತ ಮನೋವೈದ್ಯೆ ಮತ್ತು ನೃತ್ಯ ಕಲಾವಿದೆ ಡಾ. ಕೆ.ಎಸ್. ಪವಿತ್ರಾ ಅವರ ನೃತ್ಯರೂಪಕವನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿದರು.
ಡಾ.ದ.ರಾ. ಬೇಂದ್ರೆ ಅವರ ಹಾಡುಗಳನ್ನು ನೃತ್ಯರೂಪಕದಲ್ಲಿ ಡಾ. ಪವಿತ್ರಾ ಅವರು ಬಿಂಬಿಸಿದರು. ನೀ ಹಿಂಗ ನೋಡಬೇಡ ನನ್ನ, ಪಾತರಗಿಕ್ಕಿ ಪಕ್ಕಾ ನೋಡಿದೇನ ಅಕ್ಕ, ಇಳಿದು ಬಾ ತಾಯಿ ಇಳಿದು ಬಾ ತಾಯಿ ಮುಂತಾದ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು.
ನೃತ್ಯರೂಪಕ ಉದ್ಘಾಟಿಸಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಹರೀಶ್ಕುಮಾರ್ ಮಾತನಾಡಿ, ಔದುಂಬರ ಅಂದರೆ ಅತ್ತಿಮರ. ದತ್ತೋಪಾಸಕರು ಅತ್ತಿಮರಕ್ಕೆ ವಿಶೇಷ ಸ್ಥಾನ ನೀಡಿದ್ದು, ಅದು ಅವರಿಗೆ ಪೂಜ್ಯನೀಯವಾಗಿದೆ. ದ.ರಾ. ಬೇಂದ್ರೆ ಅವರ ಕೃತಿಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ದತ್ತನ ಆವಾಹನೆಯಾಗಬೇಕು. ಪಾಂಡಿತ್ಯ, ಜನಪದ ಸೊಗಡು ಮತ್ತು ಜನಸಾಮಾನ್ಯರನ್ನು ತಲುಪುವಂತೆ ರಚಿತವಾಗಿರುವ ದ.ರಾ.ಬೇಂದ್ರೆಯವರ ಕಾವ್ಯಗಳು ಶ್ರೇಷ್ಠವಾಗಿವೆ ಎಂದು ಬಣ್ಣಿಸಿದರು.
ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಮಿಲನ್ಸಾರ್ ಅಹಮ್ಮದ್, ನಿಲಯದ ಎಂಜಿನಿಯರ್ ಮೆಹತ್ರೆ ಹಾಜರಿದ್ದರು. ಉಷಾ ಲತಾ ಕಾರ್ಯಕ್ರಮ ನಿರೂಪಿಸಿದರು.