ನವದೆಹಲಿ (ಪಿಟಿಐ): ಭಾರತ ತಂಡದ ಆಟಗಾರರನ್ನು ಸಂದರ್ಶನ ನೀಡುವಂತೆ ಮಾಧ್ಯಮಗಳು ಒತ್ತಾಯಿಸಬಾರದು. ಇದರಿಂದ ತಂಡದ ಆಟಗಾರರ ಏಕಾಗ್ರತೆಗೆ ಭಂಗವುಂಟಾಗುತ್ತಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದೆ.
ಈ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್, ‘ಮಾಧ್ಯಮ ಪ್ರತಿನಿಧಿಗಳು ತಂಡದ ಆಟಗಾರರಿಗೆ ಮೊಬೈಲ್ ಕರೆ ಮತ್ತು ಎಸ್ಎಂಎಸ್ ಮೂಲಕ ಸಂದರ್ಶನ ಮತ್ತು ವಿಡಿಯೋ ಕ್ಲಿಪ್ಗಾಗಿ ಕೇಳುತ್ತಿದ್ದಾರೆ. ವಿಶ್ವಕಪ್ ಗೆಲುವಿನತ್ತ ದೃಷ್ಟಿ ನೆಟ್ಟಿರುವ ಭಾರತದ ಆಟಗಾರರ ಚಿತ್ತವನ್ನು ಇದು ಕದಡಬಾರದು. ಆದ್ದರಿಂದ ಮಾಧ್ಯಮಗಳು ಸಹಕರಿಸಬೇಕು’ ಎಂದು ವಿನಂತಿಸಿದ್ದಾರೆ.