ಹಗರಿಬೊಮ್ಮನಹಳ್ಳಿ: ಆಡಂಬರದ ಮದುವೆಯಿಂದ ಕುಟುಂಬದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಮಠಗಳು ಹಾಗೂ ಮಠಾಧೀಶರು ನಿರಂತರವಾಗಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯದ ಆರ್ಥಿಕ ಪುನಶ್ಚೇತನಕ್ಕೆ ನೆರವಾಗಬೇಕು ಎಂದು ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.
ತಾಲ್ಲೂಕಿನ ಸುಕ್ಷೇತ್ರ ನಂದಿಪುರದಲ್ಲಿ ಭಾನುವಾರ ಗುರು ದೊಡ್ಡಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ದೊಡ್ಡ ಬಸವೇಶ್ವರ ಸೇವಾ ಸಮಿತಿಯು ಆಯೋಜಿಸಿದ್ದ ಪ್ರಥಮ ಆದರ್ಶ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಘವಾಂಕರ ಸಿದ್ಧರಾಮ ಚರಿತ್ರೆಯಲ್ಲಿ ಸಿದ್ಧರಾಮರು ಒಂದೆ ದಿನದಲ್ಲಿ ಒಂದು ಸಾವಿರ ಸಾಮೂಹಿಕ ವಿವಾಹಗಳನ್ನು ನಡೆಸಿದ ಉಲ್ಲೇಖವಿದೆ. ಇಂತಹ ಆದರ್ಶ ಪರಂಪರೆಯನ್ನು ಮುಂದುವರಿಸಿ ಕೊಂಡು ಹೋಗುವ ಜವಾಬ್ದಾರಿ ಮಠಮಾನ್ಯರ ಮೇಲಿದೆ ಎಂದು ಅಭಿಪ್ರಾಯಪಟ್ಟರು.ತಮ್ಮ ಮುಂದಿನ ಪೀಳಿಗೆಗೆ ಸಮರ್ಪಕ ಆರೋಗ್ಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ನೂತನ ವಧು ವರರು ಮಿತ ಸಂತಾನ ಹೊಂದಬೇಕು ಎಂದರು.
ಸಾಮೂಹಿಕ ವಿವಾಹಗಳಲ್ಲಿ ಸಂಘಟಕರಿಗೆ ಗೊತ್ತಿಲ್ಲದಂತೆ ವರದಕ್ಷಿಣೆ ತೆಗೆದುಕೊಂಡು ವಿವಾಹವಾಗುವುದು ಸರಿಯಲ್ಲ ಎಂದು ತಿಳಿಸಿ ನೂತನ ವಧುವರರನ್ನು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ 55 ಜೋಡಿಗಳು ಹಸೆಮಣೆ ಏರಿದವು. ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಾಮೂಹಿಕ ವಿವಾಹದ ಸಮಾರಂಭದ ನೇತೃತ್ವ ವಹಿಸಿದ್ದ ಮಹಾರಾಷ್ಟ್ರದ ನಾಗಠಾಣದ ಷ.ಬ್ರ. ರುದ್ರ ಪಶುಪತಿ ಶಿವಾಚಾರ್ಯ ಮಹಾರಾಜ ಹಾಗೂ ಸುಕ್ಷೇತ್ರ ನಂದೀಪುರ ಮಠದ ಮಹೇಶ್ವರ ಸ್ವಾಮೀಜಿ ಅವರ ಸಹೋದರರಿಬ್ಬರು ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಆದರ್ಶ ಮೆರೆದರು.
ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹನಸಿ-ಉತ್ತಂಗಿಯ ಶಂಕರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಮುಷ್ಟೂರು ರುದ್ರಮುನಿ ಶಿವಾಚಾರ್ಯ, ಮಾನಿಹಳ್ಳಿ ಮಳಿಯೋಗೀಶ್ವರ ಶಿವಾಚಾರ್ಯ, ಜಿ.ಪಂ. ಮಾಜಿ ಸದಸ್ಯ ಅಕ್ಕಿ ತೋಟೇಶ್ ಹಾಗೂ ದೊಡ್ಡ ಬಸವೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರೇಶ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.