ನಾಗಪುರ(ಪಿಟಿಐ): ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ತನಿಖಾ ವರದಿ ಹಾಗೂ ಈ ಸಂಬಂಧದ ‘ಕ್ರಮ ಕೈಗೊಂಡ ವರದಿ’ ಯನ್ನು (ಎಟಿಆರ್) ಮಹಾರಾಷ್ಟ್ರ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿತು.
ಇಬ್ಬರು ಸದಸ್ಯರ ನ್ಯಾಯಾಂಗ ಆಯೋಗದ ವರದಿ ಹಾಗೂ ಎಟಿಆರ್ ಅನ್ನು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್್ ವಿಧಾನಸಭೆಯ ಚಳಿಗಾಲದ ಅಧಿವೇಶನದ ಕೊನೆ ದಿನ ಮಂಡಿಸಿದರು.
ಆದರೆ, ನ್ಯಾಯಾಂಗ ಆಯೋಗದ ವರದಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದ ಈ ಹಗರಣದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ರಾಜಕಾರಣಿಗಳು ಹಾಗೂ ನೌಕರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಹಗರಣದಲ್ಲಿ ದುರಾಸೆ, ಸ್ವಜನಪಕ್ಷ ಪಾತ, ಬೇಕಾದವರಿಗೆ ಒಲವು ತೋರಲಾಗಿದೆ ಎಂದು ಆಯೋಗ ಹೇಳಿದೆ. ಸೊಸೈಟಿಯ 102 ಸದಸ್ಯರಲ್ಲಿ 25 ಜನರು ಅನರ್ಹತೆ ಹೊಂದಿದ್ದಾರೆ ಹಾಗೂ 22 ಫ್ಲ್ಯಾಟ್ಗಳನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದೆ.
ಆದರ್ಶ ಸೊಸೈಟಿಗೆ ಮಾಜಿ ಸಿ.ಎಂ ವಿಲಾಸ್ ರಾವ್ ದೇಶ್ ಮುಖ್್, ಅಶೋಕ್ ಚವಾಣ್, ಸುಶೀಲ್ ಕುಮಾರ್ ಶಿಂಧೆ, ಸಿ.ಎಂ ಪೃಥ್ವಿರಾಜ್ ಚವಾಣ್್ ಇತರರು ಪೋಷಕರಾಗಿದ್ದರು. ಆದರೆ, ಅಶೋಕ್ ಚವಾಣ್ ಅವರೊಬ್ಬರನ್ನೇ ಆರೋಪಟ್ಟಿಯಲ್ಲಿ ಸೇರಿಸಲಾಗಿದೆ.