ನವದೆಹಲಿ (ಪಿಟಿಐ): ಆದಾಯ ತೆರಿಗೆ ಬಾಕಿ ಪಾವತಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್ಗೆ ಸೂಕ್ತ ಉತ್ತರ ನೀಡಲು ಇನ್ನಷ್ಟು ಕಾಲಾವಕಾಶದ ಅವಶ್ಯಕತೆ ಇದೆ ಎಂದು ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಅಭಿಪ್ರಾಯಪಟ್ಟಿದಾರೆ.
9.27 ಲಕ್ಷ ರೂಪಾಯಿ ಬಾಕಿ ಪಾವತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕೇಜ್ರಿವಾಲ ಅವರಿಗೆ ನೀಡಿದ್ದ ಗಡುವು ಗುರುವಾರ ಕೊನೆಗೊಂಡಿತು. ಈ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
`ಆದಾಯ ತೆರಿಗೆ ಇಲಾಖೆಯವರು ನನಗೆ ತುಂಬಾ ಕಡಿಮೆ ಕಾಲಾವಕಾಶ ನೀಡಿದ್ದರು. ಈ ಬಗ್ಗೆ ನಾನು ನನ್ನ ಸ್ನೇಹಿತರೊಂದಿಗೆ ಚರ್ಚಿಸುತ್ತಿದ್ದೇನೆ. ವಾರ ಅಥವಾ 10 ದಿನಗಳ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ~ ಎಂದು ಅವರು ತಿಳಿಸಿದ್ದಾರೆ.
ಸೂಕ್ತ ಸಮಯದಲ್ಲಿ ಬಾಕಿ ಪಾವತಿಸದೇ ಇರುವ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಕೇಜ್ರಿವಾಲ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕೇಜ್ರಿವಾಲ ಈ ಮೊದಲು ಭಾರತೀಯ ಕಂದಾಯ ಸೇವಾ ಇಲಾಖೆಯ ಐಆರ್ಎಸ್ ಅಧಿಕಾರಿಯಾಗಿದ್ದರು. ಇವರು ಸೇವೆಯಲ್ಲಿದ್ದಾಗಿನ 2000 -2002ರ ನಡುವಿನ ಅವಧಿಯಲ್ಲಿ 2 ವರ್ಷಅಧ್ಯಯನ ರಜೆ ಮೇಲೆ ವಿದೇಶಕ್ಕೆ ತೆರಳಿದ್ದರು. ಆಗ ಅವರು ಇಲಾಖೆಯ ಜತೆ ಮಾಡಿಕೊಂಡಿದ್ದ ಒಪ್ಪಂದಗಳು ಉಲ್ಲಂಘನೆಯಾಗಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 9.27 ಲಕ್ಷ ರೂಪಾಯಿ ಆದಾಯ ತೆರಿಗೆ ಪಾವತಿಸಬೇಕೆಂಬುದು ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತರು ಜಾರಿ ಮಾಡಿದ್ದ ನೋಟಿಸ್ನ ಸಾರವಾಗಿದೆ.