ಹಲಗೂರು: ಎಂಟು ಕಾಡಾನೆ ಹಿಂಡು ಗೊನೆ ಬಂದಿದ್ದ ಬಾಳೆತೋಟವನ್ನು ನಾಶ ಮಾಡಿ ಸಾವಿರಾರು ರೂಪಾಯಿ ನಷ್ಟಮಾಡಿರುವ ಘಟನೆ ಸಮೀಪದ ಗಾಣಾಳುವಿನಲ್ಲಿ ಈಚೆಗೆ ನಡೆದಿದೆ.
ಶಿವಾಂಕಾರೇಗೌಡ ಅವರ ಬಾಳೆ ತೋಟ ಆನೆ ದಾಳಿಗೆ ತುತ್ತಾಗಿದೆ. ಇವರು ನಾಲ್ಕು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಕಾಯಿ ಬಲಿತು ಕಟಾವು ಹಂತ ತಲುಪಿತ್ತು. ಆದರೆ ಎಂಟು ಕಾಡಾನೆ ಹಿಂಡು ತೋಟ ವನ್ನು ಬಹುತೇಕ ಹಾಳು ಮಾಡಿವೆ. ಗಿಡವನ್ನು ಬುಡಮೇಲು ಮಾಡಿ ತಿರುಳನ್ನು ತಿಂದುಹಾಕಿವೆ. ಮತ್ತಷ್ಟು ಗಿಡಗಳನ್ನು ತುಳಿದುಹಾಕಿವೆ. ಬಸವನ ಬೆಟ್ಟ ಅರಣ್ಯ ಪ್ರದೇಶದಿಂದ ಆನೆ ಬಂದಿವೆ ಎಂದು ಊಹಿಸಲಾಗಿದೆ.
ಮನವಿ: ಈ ಭಾಗದಲ್ಲಿ ಪ್ರತಿವರ್ಷ ಆನೆ ದಾಳಿಗೆ ಲಕ್ಷಾಂತರ ಬೆಲೆಯ ಬೆಳೆಗಳು ಹಾಳಾಗುತ್ತಿವೆ. ಆನೆ ದಾಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡುಹಿಡಿ ಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ಅಲ್ಲದೆ ಕಳೆದ ವರ್ಷದಲ್ಲಿ ಆನೆ ದಾಳಿಯಿಂದ ಹಾನಿಗೊಳಗಾದ ಬೆಳೆ ಪರಿಹಾರ ಹಣವನ್ನು ನೀಡುವಲ್ಲಿಯೂ ತಾರತಮ್ಯ ಎಣಿಸುತ್ತಿದ್ದಾರೆ. ಕಾಡಿನಿಂದ ಹೊರ ಬರುವ ಆನೆಗಳನ್ನು ಕಾಡಿಗೆ ಓಡಿಸಲು ಹೆಚ್ಚಿನ ಅರಣ್ಯ ಸಿಬ್ಬಂದಿ ನೇಮಿಸಬೇಕು. ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಆನೆ ದಾಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.