ಮಾಗಡಿ: ತಾಲ್ಲೂಕಿನ ಗುಡ್ಡಹಳ್ಳಿಗೂ ಕಾಡಾನೆಗಳಿಗೂ ಇರುವ ಇನ್ನಿಲ್ಲದ ನಂಟಿನಿಂದಾಗಿ ಗ್ರಾಮಸ್ಥರು ನಿದ್ದೆಯಿಲ್ಲದೆ ಹಗಲು ರಾತ್ರಿ ಎನ್ನದೆ ಜೀವವನ್ನು ಆತಂಕದ ಸ್ಥಿತಿಯಲ್ಲಿ ಕಳೆಯುವಂತಾಗಿದೆ.
ಬುಧವಾರ ಸರಿ ರಾತ್ರಿಯಲ್ಲಿ ಗ್ರಾಮದ ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ ಅವರ ಬಾಳೆಯ ತೊಟಕ್ಕೆ ದಾಳಿ ಇಟ್ಟಿರುವ 3 ಕಾಡಾನೆಗಳು ಕುಯ್ಲಿಗೆ ಬಂದಿದ್ದ ಬಾಳೆಯ ತೋಟವನ್ನು ಸಂಪೂರ್ಣವಾಗಿ ನಾಶ ಮಾಡಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ಬಾಳೆಯ ದಿಂಡನ್ನು ಸೀಳಿ ಅದರಲ್ಲಿರುವ ಸಿಹಿ ರಸವನ್ನು ಹೀರುವ ಆನೆಗಳು ಕೊನೆಗೆ ಬಾಳೆಯ ಗೊನೆಗಳನ್ನು ತುಳಿದು ನಾಶ ಪಡಿಸಿವೆ.
ಮಂಗಳವಾರ ಇದೇ ಗ್ರಾಮದ ಶಿವಲಿಂಗಯ್ಯ ಅವರ ಹಲಸಿನ ಮರಗಳಲ್ಲಿದ್ದ ಹಣ್ಣುಗಳನ್ನು ತಿಂದು ಹಾಕಿದ್ದವು. ಬಾಳೆ, ತೆಂಗು, ಹಲಸಿನ ಮರಗಳನ್ನು ನಾಶ ಮಾಡಿದ್ದವು.
5 ವರ್ಷಗಳಿಂದಲೂ ಆನೆಗಳ ಉಪಟಳ ಜಾಸ್ತಿಯಾಗಿದ್ದು ರೈತರು ಪದೇ ಪದೇ ನಷ್ಟ ಅನುಭವಿಸುವಂತಾಗಿದೆ. ಈವರೆವಿಗೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗುಡ್ಡಹಳ್ಳಿಯ ಗ್ರಾಮಸ್ಥರು ಆರೋಪಿದ್ದಾರೆ.
ರಾಜ್ಯ ಮಟ್ಟದ ಟೆನಿಸ್ ಕ್ರಿಕೆಟ್ ಟೂರ್ನ್ಮೆಂಟ್
ಶಾಸಕ ಎಚ್.ಸಿ. ಬಾಲಕೃಷ್ಣ ಅವರ 47ನೇ ಜನ್ಮದಿನದ ಅಂಗವಾಗಿ ಎಚ್ಸಿಬಿ ಅಭಿಮಾನಿಗಳ ಸಂಘದ ವತಿಯಿಂದ ಫೆ.25ಮತ್ತು 26 ರಂದು ಕೋಟೆ ಬಯಲಿನಲ್ಲಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸಲಾಗಿದೆ.
ಪ್ರಥಮ ಬಹುಮಾನ ರೂ50 ಸಾವಿರ, ದ್ವಿತೀಯ ಬಹುಮಾನ ರೂ25ಸಾವಿರ ಮತ್ತು ಎಚ್ಸಿಬಿ ಕಪ್ ಒಳಗೊಂಡಿದೆ. ಆಸಕ್ತ ತಂಡಗಳು 4 ಸಾವಿರ ರೂಪಾಯಿ ಪ್ರವೇಶ ಶುಲ್ಕ ನೀಡಿ ಗುರುಸ್ವಾಮಿ-9591316373 ಇವರಲ್ಲಿ ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.
ಜನ್ಮದಿನದ ಅಂಗವಾಗಿ ತಾಲ್ಲೂಕಿನ 47 ಗ್ರಾಮಗಳಲ್ಲಿ ವಿವಿಧ ಬಗೆಯ ದೇಶಿಯ ಸಸಿಗಳನ್ನು ನೆಡಲಾಗುವುದು ಎಂದು ವ್ಯವಸ್ಥಾಪಕ ಜಿ. ರೂಪೇಶ್ ಕುಮಾರ್ ತಿಳಿಸಿದ್ದಾರೆ.
ಫೆ.25 ರಂದು ಬೆಳಿಗ್ಗೆ10 ಗಂಟೆಗೆ ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಲಿದ್ದಾರೆ.