ಬಂಕಾ, (ಬಿಹಾರ) (ಪಿಟಿಐ): ಇಲ್ಲಿನ ಮಜ್ಹಿದ್ ಎಂಬ ಗ್ರಾಮದ ಮನೆಯೊಂದರಲ್ಲಿ ಅಡಗಿಕೊಂಡಿದ್ದ ನಕ್ಸಲೀಯರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ 6 ಬಂಡುಕೋರರು ಮೃತರಾಗಿದ್ದಾರೆ.ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮನೆಯನ್ನು ನೆಲಸಮಗೊಳಿಸಲಾಗಿದೆ.
‘ಸುಮಾರು 12 ಮಂದಿ ಬೃಹತ್ ಶಸ್ತ್ರಸಜ್ಜಿತ ನಕ್ಸಲೀಯರಿಗೆ ಶರಣಾಗುವಂತೆ ತಿಳಿಸಲಾಯಿತು. ಆದರೆ ಅವರು ಸಿಆರ್ಪಿಎಫ್ ಮತ್ತು ವಿಶೇಷ ಕಾರ್ಯಪಡೆ (ಎಸ್ಎಪಿ) ಸಿಬ್ಬಂದಿಯತ್ತ ಗುಂಡು ಹಾರಿಸಲು ಆರಂಭಿಸಿದಾಗ ಪ್ರತಿದಾಳಿ ನಡೆಸಲಾಯಿತು’ ಎಂದು ಉಸ್ತುವಾರಿ ಎಸ್ಪಿ ಬಿ.ಕೆ.ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವನ್ ಟುಡ್ಡು ಎಂಬ ನಕ್ಸಲೀಯನನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ. ಸ್ಥಳದಿಂದ ಸ್ವಯಂಚಾಲಿತ ಬಂದೂಕೊಂದನ್ನು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣ: ಮಾರ್ಚ್ 1ರಂದು ರೈಲುತಡೆ
ಹೈದರಾಬಾದ್ (ಪಿಟಿಐ): ತೆಲಂಗಾಣ ರಾಜ್ಯ ರಚನೆಗೆ ಆಗ್ರಹಿಸಿ ಮಾರ್ಚ್ 1ರಂದು ರೈಲುತಡೆ ನಡೆಸಲಾಗುವುದು ಎಂದು ತೆಲಂಗಾಣ ಕುರಿತ ರಾಜಕೀಯ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಶನಿವಾರ ತಿಳಿಸಿದೆ.ಈ ಮಧ್ಯೆ ಶನಿವಾರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡಚಣೆ, ನೌಕರರ ಸಂಘಟನೆಯ ‘ಅಸಹಕಾರ ಚಳವಳಿ’ ಮುಂದುವರಿದಿದೆ.
ನೌಕರರ ಪ್ರತಿಭಟನೆ: ರಾಜ್ಯ ಸರ್ಕಾರಿ ನೌಕರರ ಸಂಘದ ಮುಖಂಡರ ಜತೆ ಭದ್ರತಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರು ಎಂದು ಆರೋಸಿ ಸರ್ಕಾರಿ ನೌಕರರು ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಹಳಿತಪ್ಪಿದ ಬೋಗಿಗಳು: ಪ್ರಯಾಣಿಕರು ಪಾರು
ಮೊರಾದಾಬಾದ್, (ಉತ್ತರ ಪ್ರದೇಶ) (ಐಎಎನ್ಎಸ್): ನವದೆಹಲಿಯಿಂದ ಗುವಾಹಟಿಗೆ ಹೋಗುತ್ತಿದ್ದ ಅವಧ್- ಅಸ್ಸಾಂ ಎಕ್ಸ್ಪ್ರೆಸ್ ರೈಲಿನ ಕೊನೆಯ ಮೂರು ಬೋಗಿಗಳು ಹಳಿತಪ್ಪಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪಾರಾದ ಘಟನೆ ಶನಿವಾರ ನಡೆದಿದೆ.
ಹಲವಾರು ಮೀಟರ್ಗಳಷ್ಟು ಹಳಿಗಳು ಹಾನಿಗೊಳಗಾಗಿವೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.‘ಬೋಗಿಗಳು ಹಳಿತಪ್ಪಿದಾಗ ರೈಲು ಅತ್ಯಂತ ನಿಧಾನವಾಗಿ ಚಲಿಸುತ್ತಿತ್ತು. ಆದ್ದರಿಂದ ದೊಡ್ಡ ಅನಾಹುತ ತಪ್ಪಿದೆ’ ಎಂದು ರೈಲ್ವೆ ಸುರಕ್ಷಾ ಅಧಿಕಾರಿ ಜಾನಕಿ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.