ಬೆಂಗಳೂರು: `ರಾಜ್ಯವನ್ನು ಆರೋಗ್ಯ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಖಾಸಗಿ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಬೇಕು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ಇಲ್ಲಿ ಕೋರಿದರು.
ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ `ಕ್ಲೌಡ್ ನೈನ್~ನ ದ್ವಿತೀಯ ತಾಯಿ ಹಾಗೂ ನವಜಾತ ಶಿಶುಗಳ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಖಾಸಗಿ ವಲಯದ ಆಸ್ಪತ್ರೆಗಳು ಅಂತರರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ವಿದೇಶಿಯರನ್ನೂ ಸೆಳೆಯಲು ಮುಂದಾಗಬೇಕು~ ಎಂದು ಸಲಹೆ ಮಾಡಿದರು.
ಕ್ಲೌಡ್ನೈನ್ನ ಮೊದಲ ಕೇಂದ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಶಿಶುಗಳ ಹೆರಿಗೆಯನ್ನು ಯಶಸ್ವಿಯಾಗಿ ನಡೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸದಾನಂದಗೌಡ, `ದ್ವಿತೀಯ ಕೇಂದ್ರದಲ್ಲಿ ಈ ಸಂಖ್ಯೆ ಒಂದು ಲಕ್ಷ ದಾಟಲಿ~ ಎಂದು ಹಾರೈಸಿದರು.
ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, `ಪಾಕಿಸ್ತಾನದಿಂದಲೂ ರೋಗಿಗಳು ಚಿಕಿತ್ಸೆಗಾಗಿ ನಗರಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಅಮೆರಿಕ ಸೇರಿದಂತೆ ಇತರೆ ಶ್ರೀಮಂತ ರಾಷ್ಟ್ರಗಳಿಂದಲೂ ರೋಗಿಗಳು ನಗರಕ್ಕೆ ಬರುವಂತಾಗಬೇಕು~ ಎಂದರು.
`ಕ್ಲೌಡ್ನೈನ್~ನ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕಿಶೋರ್ಕುಮಾರ್, `ಜಯನಗರದ ಪ್ರಥಮ ಕೇಂದ್ರದಲ್ಲಿ ತಾಯಿಯ ಉತ್ತಮ ಆರೈಕೆ ಮೂಲಕ ಯಶಸ್ವಿಯಾಗಿ 10 ಸಾವಿರ ಶಿಶುಗಳ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಮಾತೃ ಸಾವಿನ ಪ್ರಮಾಣ ಶೂನ್ಯವಾಗಿದ್ದು, 24 ವಾರಗಳ ಅವಧಿಪೂರ್ವ ಶಿಶುಗಳಿಂದ 500 ಗ್ರಾಂ ತೂಕದ ಮಗುವರೆಗೆ ಶೇ 99.83ರಷ್ಟು ಮಕ್ಕಳನ್ನು ಉಳಿಸಲಾಗಿದೆ~ ಎಂದು ಹೆಮ್ಮೆಯಿಂದ ಹೇಳಿಕೊಂಡರು.
`ಸದ್ಯದಲ್ಲಿಯೇ ನಗರದ ಮಲ್ಲೇಶ್ವರದಲ್ಲಿ ಮತ್ತೊಂದು ಕೇಂದ್ರವನ್ನು ಆರಂಭಿಸುವ ಗುರಿ ಹೊಂದಲಾಗಿದ್ದು, ಹಂತ-ಹಂತವಾಗಿ ದೇಶದ ವಿವಿಧೆಡೆ ನಮ್ಮ ಸೇವೆಯನ್ನು ವಿಸ್ತರಿಸುವ ಯೋಜನೆಯಿದೆ~ ಎಂದು ಅವರು ಪ್ರಕಟಿಸಿದರು.
ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಸಂಸದರಾದ ಜಿ.ಎಂ. ಸಿದ್ದೇಶ್ವರ, ಪಿ.ಸಿ. ಮೋಹನ್, ಸುರೇಶ್ ಅಂಗಡಿ, ಜನಾರ್ದನಸ್ವಾಮಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅರವಿಂದ್ ಶೆಣೈ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.