ಮೊಳಕಾಲ್ಮುರು: ಸಮುದಾಯ ಹಾಗೂ ವೈಯಕ್ತಿಕ ಸ್ವಚ್ಛತೆ ಕಾಪಾಡುವ ಮೂಲಕ ಸಂಭವನೀಯ ಆರೋಗ್ಯ ಸಮಸ್ಯೆಗಳನ್ನು ಹತೋಟಿ ಮಾಡಲು ಸಾಧ್ಯ ಎಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮದ ತಾಲ್ಲೂಕು ನೋಡಲ್ ಅಧಿಕಾರಿ ಡಾ.ಸುಧಾ ಸಲಹೆ ಮಾಡಿದರು.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಮೈರಾಡ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ರಕ್ತಹೀನತೆ ತಡೆಗಟ್ಟುವ ಕಾರ್ಯಗಳ ಪೈಕಿ ಜಂತುಹುಳು ನಾಶಕ ಔಷಧಿ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರೂ ಶ್ರಮಿಸಬೇಕುಎಂದರು.
ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎ.ಎನ್. ತಿರುಮಲಯ್ಯ, ರಕ್ತಹೀನತೆಗೆ ವಯಸ್ಸಿನ ಭೇದವಿಲ್ಲ. ಪೌಷ್ಟಿಕ ಆಹಾರ ಸೇವನೆ, ನಿಯಮಿತ ಆಹಾರ ಪದ್ಧತಿಯಿಂದ ಸಮಸ್ಯೆ ನಿವಾರಣೆ ಸಾಧ್ಯ ಎಂದರು. ಅಧ್ಯಕ್ಷತೆಯನ್ನು ತ್ಲ್ಲಾಲೂಕು ವೈದ್ಯಾಧಿಕಾರಿ ಡಾ.ಪದ್ಮಾವತಿ ವಹಿಸಿದ್ದರು. ಮೈರಾಡ ಸಂಸ್ಥೆ ಜಿಲ್ಲಾ ಮುಖ್ಯಸ್ಥ ವಿಜಯಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಆನಂದ್ ಪ್ರಕಾಶ್ ಇದ್ದರು.