ದೊಡ್ಡಬಳ್ಳಾಪುರ: `ಜನಸಾಮಾನ್ಯರಿಗೆ ಆರೋಗ್ಯ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚು ಉಪಯುಕ್ತ~ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.
ನಗರದ ಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್ ಹಾಗೂ ಶಂಕರ ನೇತ್ರಾಲಯದ ಸಹಯೋಗದೊಂದಿಗೆ ನಗರದ ಸಿನಿಮಾ ರಸ್ತೆಯಲ್ಲಿರುವ ಶ್ರೀಪಾಲ್ ಕಾಂಪ್ಲೆಕ್ಸ್ನಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಸಂಘಟನೆಗಳು ಸಾಮಾನ್ಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ, ಜನ ಸಾಮಾನ್ಯರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ಕಾಂತರಾಜ್ ಮಾತನಾಡಿ, `ಸದಾ ಕಾಲ ಸ್ಮರಣೀಯವಾಗಿ ನೀಡಬಹುದಾದದ್ದು ವಿದ್ಯೆ ಮತ್ತು ಆರೋಗ್ಯ ಮಾತ್ರ. ಆದರೆ ಇಂಥ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳುವ ಆರಂಭದ ಹೆಜ್ಜೆಗಳಲ್ಲಿ ನಾನಾ ತೊಡಕುಗಳು ಎದುರಾಗುವುದು ಸಹಜ~ ಎಂದರು.
ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಕಾರ್ಯದರ್ಶಿ ಡಿ.ಎಲ್.ಸತ್ಯನಾರಾಯಣ್,ಬಿಜೆಪಿ ಮುಖಂಡ ನಾಗೇಶ್, ಶಿಬಿರದ ಪ್ರಾಯೋಜಕ ಎಚ್.ಎಸ್.ಶಂಕರಪ್ಪ, ಟ್ರಸ್ಟ್ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಕಾರ್ಯದರ್ಶಿ ರಮೇಶ್, ಯೋಗ ನಟರಾಜ್, ಶ್ರೀಗಾಯತ್ರಿ ಪೀಠ ಯುವ ಬಳಗದ ಅಧ್ಯಕ್ಷ ಶಂಕರ್ ಇದ್ದರು.