ಮಧುಮೇಹ ದಶವ್ಯಾಧಿಗಳ ಮೂಲ
ಲೇ:ಡಾ.ವಿ. ಲಕ್ಷ್ಮೀನಾರಾಯಣ್, ಪ್ರಕಾಶನ-ಕುವೆಂಪು , ಭಾಷಾ ಭಾರತಿ , ಪ್ರಾಧಿಕಾರ, ಪುಟಗಳು-180+32, ಬೆಲೆ-ರೂ 100.
ಡಾ.ವಿ.ಲಕ್ಷ್ಮೀನಾರಾಯಣ್ ಅವರು ರಾಷ್ಟ್ರಕವಿ ಕುವೆಂಪು ಅವರ ಖಾಸಾ ವೈದ್ಯರು. ಪ್ರಮುಖವಾಗಿ ಅವರು ಮಧುಮೇಹ ತಜ್ಞರು. ದೇಶ ವಿದೇಶಗಳಲ್ಲಿನ ಮಧುಮೇಹ ಸಂಶೋಧನಾ ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಹೊಂದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಧುಮೇಹದ ಬಗ್ಗೆ ನಡೆಯುವ ಸಂಶೋಧನೆಗಳ ಬಗ್ಗೆ ಅರಿವು ಇರುವವರು. ಅಲ್ಲದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿರುವುದೇ ಅಲ್ಲದೆ ಸ್ವತಃ ಸಂಶೋಧನೆಯನ್ನೂ ಕೈಗೊಂಡಿರುವ ವಿಜ್ಞಾನಿ.
ಸರ್ಕಾರಿ ಸೇವೆಯಲ್ಲಿರುವಾಗ ಬಡವರ ವೈದ್ಯರು ಎಂಬ ಖ್ಯಾತಿಗೆ ಒಳಗಾಗಿದ್ದ ಡಾ.ಲಕ್ಷ್ಮೀನಾರಾಯಣ್ ಅವರು ಈಗ ‘ಮಧುಮೇಹ ದಶವ್ಯಾಧಿಗಳ ಮೂಲ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಅದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ.
ಅತ್ಯಂತ ಸರಳವಾದ ಭಾಷೆಯಲ್ಲಿ ಡಾ.ಲಕ್ಷ್ಮೀನಾರಾಯಣ್ ಅವರು ಮಧುಮೇಹದ ಇತಿಹಾಸ, ಮಧುಮೇಹ ಬರುವುದಕ್ಕೆ ಕಾರಣ, ಭಾರತದಲ್ಲಿ ಮಧುಮೇಹದ ಸ್ಥಿತಿ, ಮಕ್ಕಳಲ್ಲಿ ಮಧುಮೇಹ ಮುಂತಾದವುಗಳ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಮಧುಮೇಹ ಇತರ 10 ರೋಗಗಳಿಗೆ ಹೇಗೆ ಕಾರಣವಾಗುತ್ತದೆ ಎನ್ನುವುದನ್ನೂ ಸುದೀರ್ಘವಾಗಿ ವಿವರಿಸಿದ್ದೇ ಅಲ್ಲದೆ ಅವುಗಳ ನಿಯಂತ್ರಣ ಹೇಗೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆಯೂ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
ಮಧುಮೇಹ ಇದ್ದವರು ಏನೇನು ಊಟ ಮಾಡಬೇಕು ಏನೇನು ಮಾಡಬಾರದು ಎನ್ನುವುದನ್ನು ಆಕರ್ಷಕ ಶೈಲಿಯಲ್ಲಿ ವಿವರಿಸಿದ್ದಾರೆ. ಮಧುಮೇಹದ ಬಗ್ಗೆ ಕುತೂಹಲ ಇರುವವರಿಗೆಲ್ಲಾ ಇದೊಂದು ಕೈಪಿಡಿಯಂತೆ ಇದೆ.
ಮಾಹಿತಿಗೆ: 9449824994 .