ನವದೆಹಲಿ (ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿನಿ ತಮ್ಮ ಮೇಲೆ ಹೊರಿಸಿರುವ ಲೈಂಗಿಕ ಕಿರುಕುಳದ ಆರೋಪವನ್ನು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅಲ್ಲಗಳೆದಿದ್ದಾರೆ.
ಕುಮಾರ್, ಸದ್ಯ ಸುಪ್ರೀಂಕೋರ್ಟ್ನ ಹಸಿರು ನ್ಯಾಯಮಂಡಳಿ ಅಧ್ಯಕ್ಷರಾಗಿದ್ದಾರೆ. ‘ಈ ಆರೋಪದಲ್ಲಿ ಹುರುಳಿಲ್ಲ. ಇದರಲ್ಲಿ ಏನೋ ಸಂಚಿದೆ’ ಎಂದು ಅವರು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಶನಿವಾರ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ, ದೂರು ನೀಡಿರುವ ವಿದ್ಯಾರ್ಥಿನಿಗೆ ಬೆಂಬಲದ ಮಹಾಪೂರವೇ ಹರಿದುಬಂದಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್, ಪ್ರಮುಖ ವಕೀಲರಾದ ಕಾಮಿನಿ ಜೈಸ್ವಾಲ್, ಹರೀಶ್ ಸಾಳ್ವೆ, ವೃಂದಾ ಗ್ರೋವರ್, ಮಹಿಳೆಯರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕೃಷ್ಣನ್ ಮತ್ತಿತರರು ವಿದ್ಯಾರ್ಥಿನಿಯ ಪರ ನಿಂತಿದ್ದಾರೆ.
ಗಂಭೀರ ಪ್ರಕರಣ: ‘ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಗಂಭೀರವಾದುದು’ ಎಂದು ಪರಿಸರ ಹಾಗೂ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.