ಹುಬ್ಬಳ್ಳಿ: `ಬಿಜೆಪಿ ಮತ್ತು ಆರ್ಎಸ್ಸೆಸ್ಎರಡೂ ಬೇರೆ ಬೇರೆ. ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಆರ್ಎಸ್ಎಸ್ ಮಧ್ಯಪ್ರವೇಶಿಸಿಲ್ಲ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಬಿಜೆಪಿ ವ್ಯವಹಾರದಲ್ಲಿ ಆರ್ಎಸ್ಸೆಸ್ ಕೈವಾಡ ಇದೆ' ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿಜಯ ಸಂಕೇಶ್ವರ ಮಾಡಿದ್ದ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
`ನಾವು ಸಂಪರ್ಕಿಸಿದರೆ ಮಾತ್ರ ಆರ್ಎಸ್ಸೆಸ್ನವರು ಸಲಹೆ ನೀಡುತ್ತಾರೆ. ಪಕ್ಷ ಮತ್ತು ಸರ್ಕಾರದ ಚಟುವಟಿಕೆಯಲ್ಲಿ ಆರ್ಎಸ್ಎಸ್ ಮಧ್ಯಪ್ರವೇಶಿಸಿದ್ದು ಮುಖ್ಯಮಂತ್ರಿಯಾಗಿ ನನ್ನ ಅರಿವಿಗೆ ಬಂದಿಲ್ಲ' ಎಂದರು.
`ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಭೇಟಿಯಾಗುವ ವಿರೋಧ ಪಕ್ಷಗಳ ನಿರ್ಧಾರ ಅರ್ಥವಿಲ್ಲದ್ದು' ಎಂದು ಶೆಟ್ಟರ್ ಟೀಕಿಸಿದರು.
`ಮಸೂದೆಗಳ ಕುರಿತು ಚರ್ಚೆ ನಡೆಸಲು ಸಾಕಷ್ಟು ಅವಕಾಶ ಇದ್ದರೂ ಬಳಸಿಕೊಳ್ಳಲು ವಿರೋಧ ಪಕ್ಷಗಳು ವಿಫಲವಾಗಿವೆ' ಎಂದರು. `ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹಮತ ಇರುವ ಬಗ್ಗೆ ಅರಿವು ಇದ್ದುರಿಂದ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಲಿಲ್ಲ' ಎಂದರು.
`ಎಲ್ಲ ಬಿಜೆಪಿ ಶಾಸಕರು ಮತ್ತು ಸಚಿವರು ಸರ್ಕಾರದ ಜೊತೆ ಇದ್ದಾರೆ. ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದ 14 ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ' ಎಂದರು.